ಕಾಲು ಗಳೆರಡು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ,
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ,
ಅದರಿಚ್ಚೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ || ಅಲ್ಲಮ ಪ್ರಭು ||
ಅರ್ಥ : ದೇಹ ಒಂದು ಬಂಡಿ. ಕಾಲುಗಳೇ ಚಕ್ರಗಳು, ಇದನ್ನು ನಡೆಸುತ್ತಿರುವವರು ಐದು ಜನ!! ಈ ಐದ ಜನರೆಂದರೆ ಭಿನ್ನ ಕಾರ್ಯಗಳನ್ನು ನಡೆಸುವ ಪಂಚೇಂದ್ರಿಯಗಳು. ಆತ್ಮನೆಂಬ ಒಡಯನು ಈ ಬಂಡಿಯಲ್ಲಿ ಪ್ರಯಾಣ ಮಾಡುತ್ತಾನೆ. ಅವನು ಯೇರಿಗೂ ಏನನ್ನೂ ಹೇಳುವುದಿಲ್ಲ. ಆದ್ದರಿಂದ ಪಂಚೇಂದ್ರಿಯಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಈ ಸ್ವಾತಂತ್ರ್ಯವನ್ನು ಬಳಸಿ, ಒಡೆಯನ ಇಚ್ಛೆಯನ್ನು ತಾವಾಗಿಯೇ ಅರಿತು ಪಂಚೇಂದ್ರಿಯಗಳು ದೇಹದ ಬಂಡಿಯನ್ನು ಮುನ್ನಡೆಸಬೇಕು. ಇಲ್ಲದಿದ್ದರೆ ಒಂದೊಂದೂ ಒಂದೊಂದು ದಿಕ್ಕಿಗೆ ಚಲಿಸಿ ಬಂಡಿಯ ಅಚ್ಚು ಮುರಿದುಬೀಳುತ್ತದೆ.
– ಈ ವಚನದ ಮೂಲಕ ಅಲ್ಲಮಪ್ರಭುಗಳು ಪಂಚೇಂದ್ರಿಯಗಳು ಸ್ವನಿಯಂತ್ರಣ ಹೇರಿಕೊಂಡು ತಮ್ಮ ಕರ್ತವ್ಯ ನಿರ್ವಹಿಸುತ್ತಾ ದೇಹದ ಬಂಡಿಯನ್ನು ಮುಕ್ತಿ ಪಥದೆಡೆಗೆ ಕರೆದೊಯ್ಯಬೇಕೆಂದು ಸೂಚಿಸಿದ್ದಾರೆ.