ದುಃಖ ಹೇಗೆ ಹುಟ್ಟುತ್ತದೆ? ಅದನ್ನು ಹೋಗಲಾಡಿಸುವುದು ಹೇಗೆ!?

ನಮ್ಮ ದುಃಖಕ್ಕೆ ನಾವೇ ಕಾರಣ. ನಾವೇ ಉಂಟುಮಾಡಿಕೊಂಡ  ದುಃಖದಿಂದ ಹೊರಬರಬೇಕೆಂದರೆ, ಶಾಶ್ವತದ ಹಂಬಲವನ್ನು ಬಿಟ್ಟುಬಿಡಬೇಕು. ನಮ್ಮ ನಮ್ಮ ಬದುಕಿನ ಶಾಶ್ವತದ ಪರಿಕಲ್ಪನೆಗಳು ನಮ್ಮ ಆಯಸ್ಸಿನವರೆಗೆ ಇರುತ್ತವೆ. ನಾವು ಬದುಕಿರುವಷ್ಟೂ ಕಾಲ ನಾವು ಬಯಸಿದ್ದೆಲ್ಲಾ ಜೊತೆಗಿರಬೇಕು ಅನ್ನುವ ಬಯಕೆಯೇ ದುಃಖಕ್ಕೆ ಮೂಲವಾಗುತ್ತದೆ.  ~ ಸಾ. ಹಿರಣ್ಮಯಿ

ದುಃಖ ಹೇಗೆ ಹುಟ್ಟುತ್ತದೆ? ತಾತ್ಕಾಲಿಕ ಸಂಗತಿಗಳು ಶಾಶ್ವತವಾಗಿರಲೆಂದು ನೀವು ನಿರೀಕ್ಷಿಸಿದಾಗ ದುಃಖ ಹುಟ್ಟುತ್ತದೆ. ನಾವು ಬಯಸುವ ವಸ್ತು, ವ್ಯಕ್ತಿಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತೇನೆ ಎಂಬ ಭ್ರಮೆಯು ದುಃಖಕ್ಕೆ ದಾರಿಯಾಗುತ್ತದೆ. ವಯಸ್ಸಾದಂತೆಲ್ಲ ನಮ್ಮ ರೂಪ, ಸೌಂದರ್ಯ, ಸಾಮರ್ಥ್ಯಗಳು ಕುಂದಿಹೋಗುತ್ತದೆ. ಕಾಲಕ್ರಮದಲ್ಲಿ ನಾವು ನಮ್ಮ ಪ್ರೀತಿಯ ವಸ್ತು – ವ್ಯಕ್ತಿಗಳನ್ನು ಕಳೆದುಕೊಳ್ಳುತ್ತಲೇ ಸಾಗುತ್ತೇವೆ. ಅದನ್ನು ಹಿಂಬಾಲಿಸಿ ದುಃಖವೂ ಉಂಟಾಗುತ್ತದೆ.

ಆದ್ದರಿಂದ, ನಮ್ಮ ದುಃಖಕ್ಕೆ ನಾವೇ ಕಾರಣ. ನಾವೇ ಉಂಟುಮಾಡಿಕೊಂಡ  ದುಃಖದಿಂದ ಹೊರಬರಬೇಕೆಂದರೆ, ಶಾಶ್ವತದ ಹಂಬಲವನ್ನು ಬಿಟ್ಟುಬಿಡಬೇಕು. ನಮ್ಮ ನಮ್ಮ ಬದುಕಿನ ಶಾಶ್ವತದ ಪರಿಕಲ್ಪನೆಗಳು ನಮ್ಮ ಆಯಸ್ಸಿನವರೆಗೆ ಇರುತ್ತವೆ. ನಾವು ಬದುಕಿರುವಷ್ಟೂ ಕಾಲ ನಾವು ಬಯಸಿದ್ದೆಲ್ಲಾ ಜೊತೆಗಿರಬೇಕು ಅನ್ನುವ ಬಯಕೆಯೇ ದುಃಖಕ್ಕೆ ಮೂಲವಾಗುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಯಾವುದೂ ಶಾಶ್ವತವಲ್ಲ ಅನ್ನುವುದೇ ವಾಸ್ತವ. ಈ ವಾಸ್ತವ ಏನಿದೆಯೋ ಅದರೊಂದಿಗೆ ನೀವು ಸೌಹಾರ್ದದಿಂದ ಇರದಿದ್ದರೆ, ನೀವು ಅದರೊಡನೆ ನಿತ್ಯ ಸಂಘರ್ಷದಲ್ಲಿ ಇರಬೇಕಾಗುತ್ತದೆ.  

ಬದುಕಿನ ಸತ್ವವೇ ಬದಲಾವಣೆ. ಆದರೆ ಅಜ್ಞಾನವು ಈ ಅಂಶವನ್ನು ಸ್ವೀಕರಿಸಲು ಬಿಡುವುದಿಲ್ಲ. ಅದು ಭ್ರಮೆಯಲ್ಲಿ ಇರಲು ಬಯಸುತ್ತದೆ. ಆದ್ದರಿಂದಲೇ ನೀವು ದುಃಖ ಅನುಭವಿಸುವಿರಿ. ಇದಕ್ಕೆ ಕಾರಣವಾಗುವ ಅಜ್ಞಾನವನ್ನು ಹೊಡೆದೋಡಿಸಲು ಜಾಗೃತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ.  ನಿಮ್ಮನ್ನೇ ನೀವು ಗಮನಿಸಿ ನೋಡಿಕೊಳ್ಳಿ. ನೀವು ದೇಹವಲ್ಲ, ಕೇವಲ ವೀಕ್ಷಕ, ಒಬ್ಬ ಸಾಕ್ಷಿಯೆಂದು ನೋಡಿ. ದೇಹವು ನಿರಂತರವಾಗಿ ಬದಲಾಗುತ್ತಿರುತ್ತದೆ. ಬದಲಾವಣೆಯಲ್ಲಿ ಸೌಂದರ್ಯವನ್ನು , ಹೊಸತನವನ್ನು , ವಿಸ್ಮಯವನ್ನು ನೋಡಿ. ಬದಲಾವಣೆಯನ್ನು ತಡೆಯಬೇಡಿ, ಅದರೊಂದಿಗೆ ಸಾಮರಸ್ಯದೊಂದಿಗೆ ಇರಲು ಯತ್ನಿಸಿ. ಬದಲಾವಣೆಯನ್ನು ಆನಂದಿಸಿ. ಆದರೆ ಅದಕ್ಕೆ ಅಂಟಿಕೊಂಡಿರಬೇಡಿ. ಈ ಧ್ಯಾನಸ್ಥ ಜಾಗೃತಿಯನ್ನು ತಂದುಕೊಳ್ಳಿ. ಸಂಗತಿಗಳು ಅಚಲವೆಂಬ ಭ್ರಮೆಯನ್ನು ಕೈಬಿಡಿ.

ಮನಸ್ಸು ಎಂದರೆ ಯೋಚನೆಗಳ ಹೊರತು ಬೇರೇನಲ್ಲ . ಯೋಚನೆಗಳು ಮೋಡದ ಹಾಗೆ. ನೀವು ಆಗಸದ ಹಾಗೆ, ಒಂದು ಸಾಕ್ಷಿ ಮಾತ್ರ. ಯೋಚನೆಗಳು ಬರುತ್ತವೆ, ಹೋಗುತ್ತವೆ. ಆದರೆ ನೀವು ಕೇವಲ ಒಬ್ಬ ವೀಕ್ಷಕ. ಒಬ್ಬ ಸಾಕ್ಷಿಯಂತಿರುವುದು ಧ್ಯಾನದ ಸತ್ವ. ಅದು ಸುಲಭವಲ್ಲದಿದ್ದರೂ, ಸಾಕ್ಷಿಯಾಗುವುದನ್ನು ಅಭ್ಯಾಸ ಮಾಡಿಕೊಂಡು ಆನಂದಿಸಿ. ನಿಮಗೆ ಅದು ಸುಲಭವಲ್ಲ ಎನ್ನಿಸುತ್ತದೆ, ಏಕೆಂದರೆ ನೀವು ಅದರೊಂದಿಗೆ ಗುರುತಿಸಿಕೊಳ್ಳುವಿರಿ. ಗುರುತಿಸಿಕೊಳ್ಳುವುದು ಒಂದು ವಿಧಾನ ಅಥವಾ ಹವ್ಯಾಸ ಆಗುತ್ತದೆ. ಈ ಹವ್ಯಾಸವನ್ನು ಬದಲಿಸಿ. ಗುರುತಿಸಿಕೊಳ್ಳುವುದು ನಿಮ್ಮೊಳಗಿನ ನಕಾರಾತ್ಮಕ ಶಕ್ತಿಯ ಫಲಿತಾಂಶ. ನೀವು ತಪ್ಪಾಗಿ ಬದುಕುವುದು ಅಥವಾ ಯೋಚಿಸುವುದಿರಿಂದ ಅದು ಉಂಟಾಗುತ್ತದೆ. ನಿಮ್ಮ ಮನಸ್ಸನ್ನು ಪಳಗಿಸಿಕೊಂಡು, ತಪ್ಪು ಆಲೋಚನೆಗಳು ಮೂಡದಂತೆ ತಡೆದರೆ, ನೀವು ಆನಂದದಿಂದ ಇರುವುದು ಸಾಧ್ಯವಾಗುತ್ತದೆ. 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a reply to hema ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.