ಭಕ್ತರಿಗಾಗಿ, ದುಷ್ಟ ಶಿಕ್ಷಣಕ್ಕಾಗಿ ಕೆಂದಾವರೆಯಂಥ ಅರಳುಗಣ್ಣು ತೋರುವ ಭಗವಂತನನ್ನೇ ‘ಲೋಹಿತಾಕ್ಷ’ ಎನ್ನುವುದು. ಇದಕ್ಕೆ ಸಂಬಂಧಿಸಿದ ಎರಡು ಘಟನೆಗಳನ್ನು ನೋಡಿ….
ಲೋಕ+ಹಿತ+ಅಕ್ಷ – ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ.
ಈ ಹೆಸರಿನ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು
ನೋಡಬೇಕಾಗುತ್ತದೆ.
ಮಹಾಭಾರತ ಯುದ್ದದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ದ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ದ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ದದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಕೋಪಾವೇಶದಿಂದ ಭೀಷ್ಮನನ್ನು ಸಂಹರಿಸಲೆಂಬಂತೆ ರಥಚಕ್ರವನ್ನೇ ಹಿಡಿದು ಮುನ್ನುಗ್ಗುತ್ತಾನೆ! ಆಗ ಆತನ ಕಣ್ಣು ಕೆಂದಾವರೆ ಹೂವಿನಂತೆ ಕೆಂಪಾಗಿ ಕಾಣುತ್ತಿರುತ್ತದೆ.
ಇದನ್ನು ನೋಡಿದ ಬೀಷ್ಮ ಎರಡೂ ಕೈಯನ್ನು ಜೋಡಿಸಿ ಹೀಗೆ ಹೇಳುತ್ತಾನೆ –
“ಹೇ ಭಗವಂತ! ನೀನು ಚಕ್ರ ಹಿಡಿಯುವುದು ಅನಿವಾರ್ಯವಾಗುವಂತೆ ನಾನು ಯುದ್ಧ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದ್ದೆ. ಆದರೆ ನೀನು ಯಾವ ಕಾರಣಕ್ಕೂ ಚಕ್ರ ಹಿಡಿಯುವುದಿಲ್ಲ ಎಂದಿದ್ದೆ. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ಮರೆತಿರುವೆ, ಆದರೆ ನಿನ್ನ ಭಕ್ತನನ್ನು ಮರೆತಿಲ್ಲ. ಇಂಥಾ ಕರುಣಾಮಯನಾದ ನೀನಲ್ಲದೆ ನಮಗೆ ಇನ್ನ್ಯಾರು ಗತಿ ? ” ಎಂದು ಸ್ತುತಿಸುತ್ತಾನೆ.
ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ ವ್ಯಕ್ತವಾಗಿದೆ.
ಇದೇ ರೀತಿ ಇನ್ನೊಂದು ಘಟನೆ ನರಸಿಂಹ ಅವತಾರದಲ್ಲಿ ಕಂಡು ಬರುತ್ತದೆ. ಹಿರಣ್ಯಕಷಿಪುವನ್ನು ಕೊಂದು ಆತನ ಕರುಳನ್ನು ಬಗೆದು ಕೊರಳಿಗೆ ಹಾಕಿಕೊಂಡರೂ, ಶಾಂತನಾಗದ ಭಗವಂತನ ಕೋಪೋದ್ರಿಕ್ತ ರೂಪವನ್ನು ಕಂಡು, ದೇವತೆಗಳೆಲ್ಲರೂ ಭಯಗೊಂಡಾಗ, ಐದು ವರ್ಷದ ಪುಟ್ಟ ಬಾಲಕ ಪ್ರಹಲ್ಲಾದನ ಪ್ರಾರ್ಥನೆಗೆ ಮಣಿದು, ಶಾಂತ ಮೂರ್ತಿಯಾಗುತ್ತಾನೆ.
ಮೇಲಿನ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತ ದುಷ್ಟರನ್ನು ತನ್ನ ಕೆಂಗಣ್ಣಿನಿಂದ ನಾಶಮಾಡಿ, ಭಕ್ತರ ಅಭಿಲಾಷೆಯನ್ನು ಪೂರ್ತಿ ಮಾಡುವುದು ಕಂಡುಬರುತ್ತದೆ.
ಇಂತಹ ಅರಳುಗಣ್ಣಿನ ಭಗವಂತನೇ ಲೋಹಿತಾಕ್ಷ !
(ಅರಳಿಮರ ಓದುಗರಾದ ಚಂದ್ರಶೇಖರ ಪಿ.ಎಸ್. ಅವರು ಸಂಗ್ರಹಿಸಿ ಕಳುಹಿಸಿದ್ದು. ಮೂಲ ಲೇಖಕರ ಹೆಸರು ತಿಳಿದಿಲ್ಲ)