ಮೂಲ : ಶಮ್ಸ್ ತಬ್ರೀಝಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ನಾನು ನಿನ್ನೊಡನೆ
ಕಠಿಣವಾಗಿ ನಡೆದುಕೊಳ್ಳುತ್ತಿರುವುದರ
ಉದ್ದೇಶ ಇಷ್ಟೇ,
ನೀನು ನಿನ್ನೊಳಗೆ ಅದುಮಿಟ್ಚುಕೊಂಡಿರುವುದೆಲ್ಲ
ಹೊರಗೆ ಹರಿದುಬರಲೆಂದು,
ಅಲ್ಲಿಯೇ ಕೊಳೆತು ನಂಜಾಗದಿರಲೆಂದು.
ನೆನಪಿರಲಿ,
ನಿನ್ನನ್ನು ಹಿಂಸೆಗೆ ಗುರಿಮಾಡುವಾಗ
ತಾನು ಯಾತನೆ ಪಡದವ
ಮಹಾ ಕ್ರೂರಿ.
ಸಹನೆಯಲ್ಲಿ ಮತ್ತು ಕ್ಷಮಿಸುವಲ್ಲಿ
ಒಂದು ಅದ್ಭುತ ಸೌಂದರ್ಯವಿದೆ
ಘನತೆ, ಒಂದು ರೀತಿಯ ಪರಿಪೂರ್ಣತೆ.
ನನಗಂತೂ ಯಾತನೆಯ ಜೊತೆ
ಒಂದಿನಿತೂ ಸಂಬಂಧವಿಲ್ಲ.
ಯಾತನೆಗೆ ಕಾರಣವೇ ನಮ್ಮ ಅಸ್ತಿತ್ವ
ಮತ್ತು, ಅಸ್ತಿತ್ವದ ವಿಳಾಸ ನನಗೆ ಅಪರಿಚಿತ.
ಅಥವಾ
ಉನ್ಮತ್ತ ಆನಂದವೇ ನನ್ನ ಅಸ್ತಿತ್ವ .
ಹೊರಗಿನ ಯಾವುದಕ್ಕೂ
ನನ್ನೊಳಗೆ ಪ್ರವೇಶವಿಲ್ಲ.
ಹೊರಗಿನ ಹೆಜ್ಜೆಗಳು ಕಂಡ ಕ್ಷಣದಲ್ಲಿಯೇ
ಒರೆಸಿ ಹಾಕಿಬಿಡುತ್ತೇನೆ.