ಸಾರ್ವತ್ರಿಕ ಸತ್ಯಗಳ ಸಮಸ್ಯೆ: ಒಂದು ದೃಷ್ಟಾಂತ ಪದ್ಯ

Wislawa Szymborska | ಕನ್ನಡಕ್ಕೆ: ಚಿದಂಬರ ನರೇಂದ್ರ

ಮೀನುಗಾರರಿಗೆ
ಸಮುದ್ರದಲ್ಲಿ ಒಂದು ಬಾಟಲಿ ಸಿಕ್ಕಿತು
ಆ ಬಾಟಲಿಯಲ್ಲಿ ಒಂದು ಚೀಟಿ.

“ ಯಾರಾದರೂ ನನ್ನ ಕಾಪಾಡಿ !
ನಾನು ಇಲ್ಲಿರುವೆ
ಸಮುದ್ರ , ನನ್ನ ಈ ನಿರ್ಜನ ದ್ವೀಪದಲ್ಲಿ
ಬಿಸಾಕಿ ಹೋಗಿದೆ
ಸಮುದ್ರದ ದಂಡೆಯಲ್ಲಿ ನಿಂತು
ರಕ್ಷಣೆಗಾಗಿ ಎದುರು ನೋಡುತ್ತಿದ್ದೇನೆ.
ಬೇಗ ಬೇಗ !
ನಾನಿಲ್ಲಿದ್ದೀನಿ ! “

ಹೀಗೆ ಬರೆದಿತ್ತು ಆ ಚೀಟಿಯಲ್ಲಿ.

“ ಇದರಲ್ಲಿ ದಿನಾಂಕ ಬೇರೆ ಬರೆದಿಲ್ಲ
ನನ್ನ ಪ್ರಕಾರ ಈಗಾಗಲೇ ಬಹಳ ತಡ ಆಗಿರಬಹುದು
ಎಷ್ಟು ವರ್ಷದ್ದೋ ಏನೋ “

ಮೊದಲ ಮೀನುಗಾರ
ತನ್ನ ಸಂಶಯ ಹಂಚಿಕೊಂಡ.

“ ಯಾವ ಸಮುದ್ರ? ಯಾವ ಜಾಗ ?
ಒಂದೂ ನಿಖರವಾಗಿಲ್ಲ”

ಎರಡನೇ ಮೀನುಗಾರನ ಸಮಸ್ಯೆ.

“ ಬಹುಶಃ ಬಹಳ ಹೊತ್ತು ಆಗಿರಲಾರದು
ಇಲ್ಲೇ ಎಲ್ಲೋ ಹತ್ತಿರದ ದ್ವೀಪವೇ ಇರಬೇಕು “
ಮೂರನೇ ಮೀನುಗಾರನ ಆಶಯ.

ಮೂವರ ಮುಖದಲ್ಲೂ ಸಂದಿಗ್ಧ
ಆಮೇಲೆ ಯಾರೂ ಮಾತೇ ಆಡಲಿಲ್ಲ.

ಸಾರ್ವತ್ರಿಕ ಸತ್ಯಗಳ ಸಮಸ್ಯೆಯೇ ಇದು.

Leave a Reply