ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು? : ಭಗವದ್ಗೀತೆಯ ಬೋಧನೆ

ಸುಖ ಬಂದಾಗ ಹೆಚ್ಚು ಹಿಗ್ಗದೇ, ಮತ್ತು ದುಃಖ ಬಂದಾಗ ಕುಗ್ಗಿ ಕುಸಿಯದೇ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞನ ಲಕ್ಷಣ. ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಈ ಅಧ್ಯಾಯದ ಶ್ಲೋಕಗಳನ್ನು ಸರಳ ಅರ್ಥದೊಂದಿಗೆ ಇಲ್ಲಿ ಪ್ರಸ್ತುತಪಡಿಸಲಾಗಿದೆ.


ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದುಃಖದಾಃ |
ಆಗಮಾಪಾಯಿನೋನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ || 2 : 14 ||
ಅರ್ಥ : “ಎಲೈ ಅರ್ಜುನ! ಶೀತೋಷ್ಣ ಮತ್ತು ಸುಖದುಃಖಗಳನ್ನು ಕೊಡುವ ಇಂದ್ರಿಯಗಳ ಮತ್ತು ವಿಷಯಗಳ ಸಂಯೋಗವು ಕ್ಷಣಭಂಗುರ. ಆದ್ದರಿಂದ, ಅದನ್ನು ಸಹಿಸಿಕೋ”
ಯಂ ಹಿ ನ ವ್ಯ್ಥಥಯಂತ್ಯೇತೇ ಪುರುಷಂ ಪುರುಷರ್ಷಭ |
ಸಮದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ || 2:15 ||
ಅರ್ಥ : “ಎಲೈ ಪುರುಷಶ್ರೇಷ್ಟನೇ! ಸುಖದುಃಖಗಳನ್ನು ಸಮಾನವಾಗಿ ತಿಳಿದುಕೊಳ್ಳುವ ಯಾವ ಧೀರನನ್ನು ಇಂದ್ರಿಯಗಳ ಮತ್ತು ವಿಷಯಗಳ ಸಂಯೋಗವು ವ್ಯಾಕುಲ ಪಡಿಸಲಾರವೋ, ಅವನು ಮೋಕ್ಷವನ್ನು ಪಡೆಯಲು ಯೋಗ್ಯನಾಗುತ್ತಾನೆ”
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಪಜಯೌ |
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ || 2:38 ||
ಅರ್ಥ : ಸುಖದುಃಖಗಳನ್ನೂ, ಲಾಭ ಹಾನಿಗಳನ್ನೂ, ಜಯ ಅಪಜಯಗಳನ್ನೂ ಸಮನಾಗಿಸಿಕೊಂಡು ಯುದ್ಧಕ್ಕೆ(ನಾವು ನಮ್ಮ ನಿಜ ಜೀವನಕ್ಕೆಂದು ಅನ್ವಯಿಸಿಕೊಳ್ಳಬೇಕು) ಸಿದ್ಧನಾಗು. ಈ ರೀತಿ ಯುದ್ಧ(ನಮ್ಮ ನಿಜ ಜೀವನದ ಕೆಲಸಗಳನ್ನು) ಮಾಡಿದರೆ, ಪಾಪ ಉಂಟಾಗುವುದಿಲ್ಲ.
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ |
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ || 2:54 ||
ಅರ್ಥ : ಕೇಶವ, ಸ್ಥಿತಪ್ರಜ್ಞನ ಲಕ್ಷಣಗಳೇನು ? ಅವನು ಹೇಗೆ ಮಾತನಾಡುತ್ತಾನೆ ? ಹೇಗೆ ಕುಳಿತುಕೊಳ್ಳುತ್ತಾನೆ ? ಹೇಗೆ ನಡೆಯುತ್ತಾನೆ ? ಎಂದು ಅರ್ಜುನನು ಶ್ರೀಕೃಷ್ಣನನ್ನು ಕೇಳುತ್ತಾನೆ.
ಇದಕ್ಕೆ ಉತ್ತರವಾಗಿ ಗೀತಾಚಾರ್ಯ ನೀಡಿರುವ ಉತ್ತರಗಳು 55ನೇ ಶ್ಲೋಕದಿಂದ 79ನೇ ಶ್ಲೋಕದವರೆಗೂ ಹರಡಿಕೊಂಡಿದ್ದು, ಅವು ಹೀಗಿವೆ:
ಯಾವಾಗ ಮನುಷ್ಯನು ಮನಸ್ಸಿನಲ್ಲಿರುವ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ತ್ಯಜಿಸಿಬಿಡುವನೋ ಆಗ ತನ್ನಲ್ಲಿಯೇ ಸಂತುಷ್ಟನಾಗಿ ಸ್ಥಿರ ಬುದ್ಧಿಯುಳ್ಳವನೆಂದು ಕರೆಯಲ್ಪಡುತ್ತಾನೆ.
ದುಃಖ ಉಂಟಾದಾಗ ಉದ್ವೇಗಗೊಳ್ಳದ, ಸುಖದಲ್ಲಿ ಆಸೆಯಿಲ್ಲದ ಹಾಗೂ ಆಸಕ್ತಿ, ಭಯ ಮತ್ತು ಕೋಪವಿಲ್ಲದವನೂ, ಸ್ಥಿರಬುದ್ದಿಯುಳ್ಳವನು ಎಂದು ಗುರುತಾಗುತ್ತಾನೆ.
ಯಾರು ಎಲ್ಲ ವಿಷಯಗಳಲ್ಲೂ ಅನಾಸಕ್ತನಾಗಿ, ಶುಭವನ್ನು ಪಡೆದಾಗ ಸಂತೋಷಿಸುವುದಿಲ್ಲವೋ ಮತ್ತು ಅಶುಭವನ್ನು ಪಡೆದಾಗ ದ್ವೇಷಿಸುವುದಿಲ್ಲವೋ, ಅವನ ಬುದ್ಧಿಯು ಸ್ಥಿರವಾಗಿರುತ್ತದೆ.
ಆಮೆಯು ಅಂಗಗಳನ್ನು ಒಳಕ್ಕೆಳೆದು ಕ್ಕೊಳ್ಳುವಂತೆ ತನ್ನ ಪಂಚೇಂದ್ರಿಯಗಳನ್ನು ವಿಷಯಗಳಿಂದ ಒಳಕ್ಕೆಳೆದುಕೊಳ್ಳುವನೋ, ಅವನ ಬುದ್ಧಿಯು ಸ್ಥಿರವಾಗಿರುವುದು.
ವಿಷಯಗಳಿಂದ ಆಕರ್ಷಿತನಾಗದವನಲ್ಲಿ ವಿಷಯಗಳು ಮಾತ್ರವೇ ನಿವೃತ್ತಿಯಾಗಿರುತ್ತವೆ. ಸ್ಥಿತಪ್ರಜ್ಞನಿಗಾದರೋ ಅನುರಾಗವೂ ಕೂಡ ನಿವೃತ್ತಿ ಯಾಗುತ್ತದೆ.
ಸತತವಾಗಿ ಪ್ರಯತ್ನಿಸುತ್ತಲೇ ಇರುವ, ಬುದ್ಧಿವಂತನ ಮನಸ್ಸನ್ನೂ ಇಂದ್ರಿಯಗಳು ಸೆಳೆಯುತ್ತವೆ. ಆದ್ದರಿಂದ ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಂಡು, ನನ್ನಲ್ಲಿಯೇ ಮನಸ್ಸಿಟ್ಟಿರಬೇಕು. ಯಾರು ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುತ್ತಾರೋ, ಅವರ ಬುದ್ಧಿಯು ಸ್ಥಿರವಾಗಿರುತ್ತದೆ.
ವಿಷಯಗಳನ್ನೇ ಯೋಚಿಸುತ್ತಿರುವವನಿಗೆ ಆ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ. ಆಸಕ್ತಿಯಿಂದ ಆಸೆ, ಆಸೆಗೆ ಅಡ್ಡಿ ಬಂದಾಗ ಕೋಪ ಉಂಟಾಗುತ್ತದೆ. ಕೋಪದಿಂದ ಅವಿವೇಕ ಹುಟ್ಟುತ್ತದೆ. ಅವಿವೇಕದಿಂದ ಸ್ಮರಣ ಶಕ್ತಿಯು ನಾಶವಾಗುತ್ತದೆ. ಸ್ಮರಣ ಶಕ್ತಿಯ ನಾಶ ದಿಂದ ಬುದ್ಧಿ ಶಕ್ತಿಯ ನಾಶ. ಇದರಿಂದ ಅವನಿಗೆ ಶ್ರೇಯಸ್ಸುಂಟಾಗುವುದಿಲ್ಲ.
ಅಂತಃಕರಣವನ್ನು ಹತೋಟಿಯಲ್ಲಿಟ್ಟುಕೊಂಡಿರುವ ಮನುಷ್ಯನು ತನ್ನ ವಶಮಾಡಿಕೊಂಡಿರುವ ರಾಗದ್ವೇಷರಹಿತವಾದ ಇಂದ್ರಿಯಗಳ ಮೂಲಕ ವಿಷಯಗಳಲ್ಲಿ ಸಂಚರಿಸುತ್ತಾ ಅಂತಃಕರಣದ ಪ್ರಸನ್ನತೆಯನ್ನು ಪಡೆಯುತ್ತಾನೆ. ಆ ಪ್ರಸನ್ನತೆಯನ್ನು ಪಡೆದವನ ದುಃಖಗಳೆಲ್ಲವೂ ನಾಶವಾಗಿ, ಅವನ ಬುದ್ಧಿಯು ಬಹಳ ಬೇಗ ಪರಮಾತ್ಮನಲ್ಲಿ ಸ್ಥಿರವಾಗುತ್ತದೆ.
ಮನಸ್ಸು ಹಾಗೂ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳದವನಲ್ಲಿ ನಿಶ್ಚಿತವಾದ ಬುದ್ಧಿಯಿರುವುದಿಲ್ಲ, ಅವನಲ್ಲಿ ಆಸ್ತಿಕಭಾವನೆಯೂ ಇರುವುದಿಲ್ಲ ಆಸ್ತಿಕಭಾವನೆಯಿಲ್ಲದವನಿಗೆ ಶಾಂತಿ ಸಿಗುವುದಿಲ್ಲ. ಹೀಗಿರುವಾಗ ಶಾಂತಿಯಿಲ್ಲದವನಿಗೆ ಸುಖವು ಸಿಗುವುದಾದರೂ ಹೇಗೆ?
ಏಕೆಂದರೆ, ನೀರಿನ ಮೇಲಿರುವ ನಾವೆಯನ್ನು ಹೇಗೆ ಗಾಳಿಯು ಹೇಗೆ ಗುರಿತಪ್ಪಿಸುವುದೋ, ಹಾಗೆಯೇ ವಿಷಯಗಳಲ್ಲಿರುವ ಯಾವ ಇಂದ್ರಿಯದ ಜೊತೆಯಲ್ಲಿ ಮನಸ್ಸು ಇರುವುದೋ, ಆ ಇಂದ್ರ್ರಿಯವು ಮನುಷ್ಯನ ಬುದ್ಧಿ ಯನ್ನು ಅಪಹರಿಸಿಬಿಡುತ್ತದೆ. ಆದ್ದರಿಂದ, ಎಲೈ ಮಹಾಬಾಹುವೇ ಯಾರ ಇಂದ್ರಿಯಗಳು ಎಲ್ಲಾ ರೀತಿಯಿಂದಲೂ ವಿಷಯಗಳಿಂದ ನಿಗ್ರಹಿಸಲ್ಪಟ್ಟಿವೆಯೋ, ಅವನ ಬುದ್ಧಿಯು ಸ್ಥಿರವಾಗಿರುತ್ತದೆ.
ಯಾವುದು ಎಲ್ಲಾ ಪ್ರಾಣಿಗಳಿಗೆ ರಾತ್ರೀಯೋ, ಆಗ ಸ್ಥಿತಪ್ರಜ್ಞ ನು ಎಚ್ಚತ್ತಿರುತ್ತಾನೆ, ಯಾವ ನಾಶವಾಗುವ ಸಂಸಾರಿಕ ಸುಖಗಳಲ್ಲಿ ಪ್ರಾಣಿಗಳು ಎಚ್ಚೆತ್ತಿರುತ್ತವೆಯೋ, ಆಗ ಅವನಿಗೆ ರಾತ್ರಿಯಾಗಿರುತ್ತದೆ.
ಹೇಗೆ ನಾನಾ ನದಿಗಳ ನೀರು ಪರಿಪೂರ್ಣ ಹಾಗೂ ಅಚಲವಾಗಿರುವ ಸಮುದ್ರದಲ್ಲಿ ಸೇರಿಹೋಗುತ್ತದೆಯೋ, ಹಾಗೆಯೇ ಎಲ್ಲಾ ಭೋಗಗಳೂ ಯಾವ ಸ್ಥಿತಪ್ರಜ್ಞನಲ್ಲಿ ಯಾವ ವಿಕಾರಗಳನ್ನೂ ಮಾಡದೇ ವಿಲೀನಗೊಳ್ಳುತ್ತವೆಯೋ, ಅವನು ಪರಮಶಾಂತಿಯನ್ನು ಹೊಂದುತ್ತಾನೆ ಹೊರತು ಭೋಗಾಪೇಕ್ಷಿಯಲ್ಲ. ಯಾರು ಎಲ್ಲಾ ಆಶೆಗಳನ್ನೂ ತ್ಯಜಿಸಿ ಮಮತೆಯಿಲ್ಲದೆ, ನಿರಹಂಕಾರಿಯಾಗಿ ಹಾಗೂ ಇಚ್ಚ್ಹಾರಹಿತನಾಗಿ ಇರುತ್ತಾನೋ ಅವನು ಶಾಂತಿಯನ್ನು ಹೊಂದುತ್ತಾನೆ
ಹೇ ಪಾರ್ಥ, ಇದು ಬ್ರಹ್ಮನನ್ನು ಅರಿತವರ ಸ್ಥಿತಿಯಾಗಿದೆ. ಇವರು ಸ್ಥಿತಪ್ರಜ್ಞರು. ಈ ಸ್ಥಿತಪ್ರಜ್ಞತೆಯನ್ನು ಪಡೆದವರು ಮೋಹಪರವಶನಾಗುವುದಿಲ್ಲ. ಹಾಗೂ ಅಂತ್ಯಕಾಲದಲ್ಲಿ ಕೂಡ ಇದೇ ನಿಷ್ಟೆಯನ್ನು ಹೊಂದಿ ಬ್ರಹ್ಮಾನಂದವನ್ನು ಪಡೆದುಕೊಳ್ಳುತ್ತಾರೆ.

1 Comment

  1. ಪರಂಪರೆ ಮತ್ತು ಧರ್ಮದ ದಾರಿಯಲ್ಲಿ ನಡೆಯಲು ಒಂದು ಕೈದೀವಿಗೆಯಂತಿವೆ ಈ ಶ್ಲೋಕಗಳು…

Leave a Reply