ಪದ್ಯದ ಅರ್ಥ ಇಬ್ಬರಿಗೆ ಮಾತ್ರ ಗೊತ್ತು ಎನ್ನುವ ಕೋಲರಿಜ್ ನ ಮಾತು ಕೇಳಿ, ಆ ಇಬ್ಬರನ್ನು ಎಲ್ಲಿ ಹುಡುಕುವುದು ಎಂದು ಪ್ರೊಫೆಸರ್ ಗೆ ಗಾಬರಿಯಾಯಿತು. ಮತ್ತು ಕೋಲರೀಜ್ ಮುಂದುವರೆದು “ ಈಗ ಈ ಪದ್ಯದ ಅರ್ಥ ಒಬ್ಬರಿಗೆ ಮಾತ್ರ ಗೊತ್ತು “ ಎಂದಾಗ ಅವರು ಇನ್ನೂ ಗಾಬರಿಯಾದರು. ಆಗ ಪ್ರೊಫೆಸರ್ ಗೆ ಉಳಿದದ್ದು ಒಂದೇ ಭರವಸೆ “ ಸರ್ ಆ ಒಬ್ಬರು ನೀವೇ ಅಲ್ಲವೆ ? ದಯವಿಟ್ಟು ಈ ಪದ್ಯದ ಅರ್ಥ ಹೇಳಿ” ಅಂದರು… ~ ಓಶೋ ರಜನೀಶ್ । ಕನ್ನಡಕ್ಕೆ : ಚಿದಂಬರ ನರೇಂದ್ರ
These poems are the poems of my freedom – existence becoming free through me. These poems will have to wait. – Coleridge
ಹೃದಯದ ಜಾಗ ಅಂಕಗಣಿತ ಅಥವಾ ತರ್ಕದ ಜಾಗ ಅಲ್ಲ ; ಅದು ಕಾವ್ಯದ ಜಾಗ, ಸಂಗೀತದ ಜಾಗ. ನೀನು ಅದನ್ನ ಖುಶಿಯಿಂದ ಅನುಭವಿಸಬಹುದೇ ಹೊರತು ಅರ್ಥಮಾಡಿಕೊಳ್ಳಲಿಕ್ಕಾಗುವುದಿಲ್ಲ.
ನನಗೆ ಇಂಗ್ಲೀಷ್ ನ ಮಹಾಕವಿ ಕೋಲರಿಜ್ ನೆನಪಾಗುತ್ತಿದ್ದಾನೆ,
ಕೋಲರಿಜ್ ತನ್ನ ಇಡೀ ಬದುಕಿನಲ್ಲಿ ಏಳಕ್ಕಿಂತ ಹೆಚ್ಚು ಪದ್ಯಗಳನ್ನ ಪೂರ್ಣ ಮಾಡಲಿಲ್ಲವಾದರೂ ಆತನನ್ನು ಇಂಗ್ಲಿಷ್ ಭಾಷೆಯ ಮಹಾಕವಿಗಳಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತದೆ. ಪದ್ಯಗಳ ಗುಣಮಟ್ಟ ಮುಖ್ಯವೇ ಹೊರತ್ತು ಪದ್ಯಗಳ ಸಂಖ್ಯೆ ಮುಖ್ಯವಲ್ಲ. ತೀರಿಕೊಂಡಾಗ ಕೋಲರಿಜ್ ತನ್ನ ಹಿಂದೆ ನಲವತ್ತು ಸಾವಿರ ಅಪೂರ್ಣ ಕವಿತೆಗಳನ್ನ ಬಿಟ್ಟುಹೋಗಿದ್ದ.
ಬದುಕಿನುದ್ದಕ್ಕೂ ಕೋಲರಿಜ್ ನ ಗೆಳೆಯರು ಅವನನ್ನು ಪೀಡಿಸುತ್ತಿದ್ದರು,
“ ನಿನೊಬ್ಬ ಹುಚ್ಚ. ಕೆಲವೇ ಕೆಲವು ಕವಿತೆಗಳಿಂದಾಗಿ ನೀನು ಇಷ್ಟು ಪ್ರಸಿದ್ಧವಾಗಿರುವಾಗ ನೀನು ನಿನ್ನ ಎಲ್ಲ ಅಪೂರ್ಣ ಕವಿತೆಗಳನ್ನ ಪೂರ್ಣ ಮಾಡುವೆಯಾದರೆ ಮಾನವ ಇತಿಹಾಸದ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ನಿನಗೆ ಬೇರೆ ಸ್ಪರ್ಧಿಗಳೇ ಇರುವುದಿಲ್ಲ. ಯಾಕೆ ನೀನು ಕವಿತೆಗಳನ್ನ ಪೂರ್ಣ ಮಾಡುವುದಿಲ್ಲ? ಅಪೂರ್ಣ ಕವಿತೆಗಳನ್ನ ಕೂಡಿಸಿಟ್ಟರೆ ಏನು ಸಾಧಿಸಿದ ಹಾಗೆ? “
“ಇದು ನಿಮಗೆ ಅರ್ಥವಾಗುವ ಮಾತಲ್ಲ ; ಕವಿತೆ ಪೂರ್ಣ ಮಾಡುವುದು ನನ್ನ ಕೈಯ್ಯಲ್ಲಿಲ್ಲ. ಬದುಕು ಅತ್ಯಂತ ಸಭ್ಯವಾಗಿ ನನಗೆ ಗೊತ್ತಾಗದಂತೆ ನನಗೆ ದಾರಿ ತೋರಿಸುವಕನಕ, ನಾನು ಯಾವ ಒತ್ತಡ, ಯಾವ ಎಳೆದಾಟ ನೂಕಾಟಗಳಿಗೆ ಒಳಗಾಗದತನಕ ಈ ಕವಿತೆಗಳನ್ನ ಪೂರ್ಣಮಾಡುವುದು ನನಗೆ ಸಾಧ್ಯವಾಗುವುದಿಲ್ಲ. ಈ ಕವಿತೆಗಳು ನನ್ನ ಬಿಡುಗಡೆಯ ಕವಿತೆಗಳು – ಬದುಕು ನನ್ನ ಮೂಲಕ ಮುಕ್ತವಾಗುವ ವಿಧಾನ ಇದು. ವಿಷಯ ಹೀಗಿರುವಾಗ ಕಾಯದೇ ಬೇರೆ ದಾರಿಯೇ ಇಲ್ಲ ಕವಿತೆಗಳಿಗೆ. “
ಕೋಲರೀಜ್ ಗೆಳೆಯರಿಗೆ ವಿವರಿಸುವ ಪ್ರಯತ್ನ ಮಾಡುತ್ತಾನೆ.
ಕೆಲವೊಮ್ಮೆ ಕವಿತೆ ಕೇವಲ ಒಂದು ಸಾಲಿನಿಂದ ಮಾತ್ರ ಅಪೂರ್ಣ, ನೀನೇ ಬರೆದುಬಿಡು ಆ ಸಾಲನ್ನ ಗೆಳೆಯರು ಒತ್ತಾಯ ಮಾಡುತ್ತಾರೆ.
“ ನಾನು ಪ್ರಯತ್ನ ಮಾಡಿದೆ ಆದರೆ ಅದು ಹಾಗೆ ಸಾಧ್ಯವಾಗುವುದಿಲ್ಲ. ಆಗ ಆ ಸಾಲಿನ ಗುಣಮಟ್ಟದಲ್ಲಿ ಭೂಮಿ ಆಕಾಶಗಳಷ್ಟು ಅಂತರ. ನಾನು ಬೇರೆಯವರನ್ನ ಮೋಸ ಮಾಡಬಹುದು ಆದರೆ ಸ್ವತಃ ನನ್ನನ್ನ ಮೋಸ ಮಾಡಿಕೊಳ್ಳಲಿಕ್ಕಾಗುವುದಿಲ್ಲ. ನಾನು ಕಾಯುತ್ತೇನೆ ; ಯಾವಾಗ ಬದುಕು ಯಾವ ಒತ್ತಡಗಳಿಲ್ಲದೇ ನನಗೆ ಒದಗಿಬರುತ್ತದೆಯೋ ಹಾಗು ಸುಮ್ಮನೇ ನನ್ನ ಒಪ್ಪಿಸುತ್ತದೆಯೋ, ನನ್ನ ಪ್ರೋತ್ಸಾಹಿಸುತ್ತದೆಯೋ ಮತ್ತು ಯಾವಾಗ ನನಗೆ ಯಾರೋ ಕೈ ಹಿಡಿದು ನಡೆಸುತ್ತಿರುವ ಅನುಭವವಾಗುತ್ತದೆಯೋ ಆಗ ಮಾತ್ತ ನಾನು ಆ ಸಾಲನ್ನ ಪೂರ್ಣ ಮಾಡುವುದು ಸಾಧ್ಯ. “
ಕೋಲರೀಜ್ ಗೆಳೆಯರಿಗೆ ತನ್ನ ಸಂದಿಗ್ಧಗಳನ್ನ ನಿವೇದಿಸಿಕೊಂಡ.
ಲಂಡನ್ ಯುನಿವರ್ಸಿಟಿಯಲ್ಲಿ ಒಮ್ಮೆ ಹೀಗಾಯಿತು, ಪ್ರೊಫೆಸರ್ ಒಬ್ಬರು ಕಾಲೇಜಿನಲ್ಲಿ ಕೋಲರೀಜ್ ನ ಕವಿತೆಯನ್ನ ಪಾಠ ಮಾಡುತ್ತಿದ್ದರು. ಪ್ರೊಫೆಸರ್ ಗೂ ಕವಿತೆಯ ಒಂದು ಸಾಲು ಅರ್ಥವಾಗಿರಲಿಲ್ಲ. ಪ್ರೊಫೆಸರ್ ತುಂಬ ಪ್ರಾಮಾಣಿಕ ಮನುಷ್ಯ, ಅವರು ತಮ್ಮ ವಿದ್ಯಾರ್ಥಿಗಳಿಗೆ ನಿಜ ಸಂಗತಿ ಹೇಳಿದರು,
“ ನನಗೆ ನಿಮ್ಮನ್ನ ಮೋಸ ಮಾಡುವುದಕ್ಕೆ ಇಷ್ಟವಿಲ್ಲ. ಕವಿತೆಯ ಈ ಒಂದು ಸಾಲು ಏನು ಮಾಡಿದರೂ ನನಗೆ ಅರ್ಥ ಆಗುತ್ತಿಲ್ಲ. ಕೋಲರೀಜ್ ನ ಮನೆ ಇರೋದು ನಮ್ಮ ಮನೆಯ ಪಕ್ಕದಲ್ಲಿಯೇ. ಅವನಿಗೀಗ ತುಂಬ ವಯಸ್ಸಾಗಿದೆ ಆದರೆ ಪಕ್ಕದ ಮನೆಯವನಾಗಿರುವುದರಿಂದ ನನಗೆ ಅವನನ್ನು ಭೇಟಿ ಮಾಡಲು, ಪ್ರಶ್ನೆ ಮಾಡಲು ಅವಕಾಶವಿದೆ. ನಾನು ಒಂದು ಕೆಲಸ ಮಾಡುತ್ತೇನೆ, ಅವನ ಮನೆಗೆ ಹೋಗಿ ಅವನನ್ನೇ ಕವಿತೆಯ ಈ ಸಾಲಿನ ಅರ್ಥ ಕೇಳುತ್ತೇನೆ. “
ಮರುದಿನ ಪ್ರೊಫೆಸರ್ ಕೋಲರಿಜ್ ನ ಮನೆಗೆ ಹೋಗಿ ಕವಿತೆಯ ಸಾಲಿನ ಅರ್ಥ ಕೇಳಿದರು. ಕವಿತೆಯ ಮೇಲೊಮ್ಮೆ ಪೂರ್ತಿಯಾಗಿ ಕಣ್ಣಾಡಿಸಿದ ಕೋಲರೀಜ್,
“ ಈ ಸಾಲು ಅರ್ಥಗರ್ಭಿತ, ನಾನು ಈ ಪದ್ಯ ಬರೆದಾಗ ಇಬ್ಬರಿಗೆ ಮಾತ್ರ ಈ ಪದ್ಯದ ಅರ್ಥ ಗೊತ್ತಿತ್ತು, ಆದರೆ ಈಗ ಈ ಪದ್ಯದ ಅರ್ಥ ಒಬ್ಬರಿಗೆ ಮಾತ್ರ ಗೊತ್ತು. “
ಪದ್ಯದ ಅರ್ಥ ಇಬ್ಬರಿಗೆ ಮಾತ್ರ ಗೊತ್ತು ಎನ್ನುವ ಕೋಲರಿಜ್ ನ ಮಾತು ಕೇಳಿ, ಆ ಇಬ್ಬರನ್ನು ಎಲ್ಲಿ ಹುಡುಕುವುದು ಎಂದು ಪ್ರೊಫೆಸರ್ ಗೆ ಗಾಬರಿಯಾಯಿತು. ಮತ್ತು ಕೋಲರೀಜ್ ಮುಂದುವರೆದು “ ಈಗ ಈ ಪದ್ಯದ ಅರ್ಥ ಒಬ್ಬರಿಗೆ ಮಾತ್ರ ಗೊತ್ತು “ ಎಂದಾಗ ಅವರು ಇನ್ನೂ ಗಾಬರಿಯಾದರು. ಆಗ ಪ್ರೊಫೆಸರ್ ಗೆ ಉಳಿದದ್ದು ಒಂದೇ ಭರವಸೆ “ ಸರ್ ಆ ಒಬ್ಬರು ನೀವೇ ಅಲ್ಲವೆ ? ದಯವಿಟ್ಟು ಈ ಪದ್ಯದ ಅರ್ಥ ಹೇಳಿ. “
“ ಇಲ್ಲ, ಈ ಪದ್ಯ ಬರೆದಾಗ ಈ ಪದ್ಯದ ಅರ್ಥ ಇಬ್ಬರಿಗೆ ಮಾತ್ರ ಗೊತ್ತಿತ್ತು, ನನಗೆ ಮತ್ತು ದೇವರಿಗೆ. ಈಗ ಈ ಪದ್ಯದ ಅರ್ಥ ದೇವರಿಗೆ ಮಾತ್ರ ಗೊತ್ತು. ಬಹಳ ಸುಂದರ ಸಾಲು ಇದು ಆದರೆ ಇದರ ಅರ್ಥ ನೆನಪಿಲ್ಲ ಅಷ್ಟೇ ಅಲ್ಲ ಈ ಪದ್ಯ ಬರೆದದ್ದು ನಾನೇ ಎನ್ನುವ ಸಂಗತಿಯೂ ನನಗೆ ನೆನಪಿಲ್ಲ “
ಕೋಲರೀಜ್ ತನ್ನ ಅಸಹಾಯಕತೆಯನ್ನ ಪ್ರೊಫೆಸರ್ ಎದುರು ಹೇಳಿಕೊಂಡ.
ಹೌದು ಕೋಲರೀಜ್ ಹೇಳಿದ್ದು ನಿಜ. ಬದುಕಿಗೆ ಅವನು ಇಟ್ಟ ಹೆಸರು ದೇವರು. ಈ ಎರಡೂ ಒಂದೇ. “ ಈ ಪದ್ಯ ನಾನು ಬರೆದಿಲ್ಲ, ಯಾವುದೋ ಒಂದು ದೊಡ್ಡ ಶಕ್ತಿ ನನ್ನ ಹಿಡಿದು ಬರೆಯಿಸಿತು. ನಾನು ಕೇವಲ ಸಾಧನ ಮಾತ್ರ, ಮಾಧ್ಯಮ ಮಾತ್ರ “ ಎನ್ನುವ ಕೋಲರೀಜ್ ನ ಮಾತು ಬಹಳ ಪ್ರಾಮಾಣಿಕ.
Osho, The Transmission of the Lamp – Talks in Uruguay, Ch 4, Q 1 (excerpt)