ಮೊದಮೊದಲ ಬೌದ್ಧ ಬಿಕ್ಖುಣಿಯರ (ಥೇರಿಯರ) ಪದ್ಯ ಸಂಗ್ರಹವೇ ‘ಥೇರಿಗಾಥಾ’. ಇವುಗಳಲ್ಲಿ ಆಯ್ದ ಕೆಲವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಕವಿ ಮತ್ತು ಅನುವಾದಕರಾದ ಚಿದಂಬರ ನರೇಂದ್ರ. ಇದು ಎರಡನೇ ಕಂತು…
ಮುತ್ತಾ ( ಬುದ್ಧ ಅವಳಿಗೆ ಹೇಳಿದಂತೆ )
ಮುತ್ತಾ, ಹೆಸರಿಗೆ ತಕ್ಕಂತೆ ನೀನು ಮುಕ್ತಳು ಗ್ರಹಣ ತೀರುತ್ತಿದ್ದಂತೆಯೇ ರಾಹುವಿನ ಜಾಲದಿಂದ ಹೊರಬಂದ ಚಂದ್ರನಂತೆ. ಬುದ್ಧಿ-ಮನಸ್ಸು ಪೂರ್ಣವಾಗಿ ಎಲ್ಲ ಅಧೀನತೆಗಳಿಂದ ಹೊರತಾಗಿರುವಾಗ ಬೇಡಿ ತಂದ ಭಿಕ್ಷೆಯನ್ನೂ ನೀನು ಚಪ್ಪರಿಸಿಕೊಂಡು ರುಚಿ ನೋಡುತ್ತೀಯ.
ಪುನ್ನಾ ( ಬುದ್ಧ ಅವಳಿಗೆ ಹೇಳಿದಂತೆ )
ಪುನ್ನಾ, ಪೂರ್ಣಳು ನೀನು ಹಾಗಾಗಿಯೇ ಪೂರ್ಣಕ್ಕೆ ನಿನ್ನ ಹೆಸರು, ತುಂಬಿಕೊಂಡ ಹುಣ್ಣಿಮೆಯ ಚಂದ್ರನಂತೆ ತುಂಬಿಕೋ ಜಗತ್ತಿನ ಎಲ್ಲ ಒಳ್ಳೆಯ ಸಂಗತಿಗಳನ್ನ, ಕತ್ತರಿಸಲಿ ನಿನ್ನ ಪರಿಪೂರ್ಣ ವಿವೇಕ ಯಾವುದು ಕತ್ತಲೆಯೋ ಆ ಎಲ್ಲವನ್ನೂ.
ತಿಸ್ಸಾ ( ಬುದ್ಧ ಅವಳಿಗೆ ಹೇಳಿದಂತೆ )
ತಿಸ್ಸಾ, ಯಾವುದು ಹಿಡಿದು ನಿನ್ನನ್ನು ಹಿಂದೆ ಎಳೆಯುತ್ತದೆಯೋ ಮಂಕಾಗಬೇಡ ಅದರ ಸಾಮರ್ಥ್ಯದೆದುರು, ಆ ಎಲ್ಲವನ್ನೂ ಹಿಂದೆ ಹಾಕಲು ಸಾಧ್ಯವಾಗುವಂತೆ ಕಠಿಣ ಸಾಧನೆಯಲ್ಲಿ ತೊಡಗಿಕೋ, ನಿನ್ನ ಹಿಡಿದು ಎಳೆಯುತ್ತಿರುವ ಎಲ್ಲದರಿಂದ ಬಿಡಿಸಿಕೊಂಡಾಗಲೇ, ಒಳಗಿನಿಂದ ಹೊರಗೆ ಚಿಮ್ಮಲು ಹಾತೆರೆಯುತ್ತಿರುವ ಭ್ರಷ್ಟತೆಗೆ ಯಾವ ಅವಕಾಶವೂ ಇಲ್ಲದಂತೆ ಈ ಜಗತ್ತಿನಲ್ಲಿ ಬದುಕುವ ಸಾಧ್ಯತೆ ನಿನಗೆ.