ಮುತ್ತಾ, ಪುನ್ನಾ, ತಿಸ್ಸಾ : ಬಿಕ್ಖುಣಿಯರ ಪದ್ಯಗಳು #2

ಮೊದಮೊದಲ ಬೌದ್ಧ ಬಿಕ್ಖುಣಿಯರ (ಥೇರಿಯರ) ಪದ್ಯ ಸಂಗ್ರಹವೇ ‘ಥೇರಿಗಾಥಾ’. ಇವುಗಳಲ್ಲಿ ಆಯ್ದ ಕೆಲವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಕವಿ ಮತ್ತು ಅನುವಾದಕರಾದ ಚಿದಂಬರ ನರೇಂದ್ರ. ಇದು ಎರಡನೇ ಕಂತು…

ಮುತ್ತಾ ( ಬುದ್ಧ ಅವಳಿಗೆ ಹೇಳಿದಂತೆ )

ಮುತ್ತಾ,
ಹೆಸರಿಗೆ ತಕ್ಕಂತೆ ನೀನು ಮುಕ್ತಳು
ಗ್ರಹಣ ತೀರುತ್ತಿದ್ದಂತೆಯೇ
ರಾಹುವಿನ ಜಾಲದಿಂದ ಹೊರಬಂದ ಚಂದ್ರನಂತೆ.
ಬುದ್ಧಿ-ಮನಸ್ಸು ಪೂರ್ಣವಾಗಿ 
ಎಲ್ಲ ಅಧೀನತೆಗಳಿಂದ ಹೊರತಾಗಿರುವಾಗ
ಬೇಡಿ ತಂದ ಭಿಕ್ಷೆಯನ್ನೂ
ನೀನು ಚಪ್ಪರಿಸಿಕೊಂಡು ರುಚಿ ನೋಡುತ್ತೀಯ.

ಪುನ್ನಾ ( ಬುದ್ಧ ಅವಳಿಗೆ ಹೇಳಿದಂತೆ )

ಪುನ್ನಾ,
ಪೂರ್ಣಳು ನೀನು
ಹಾಗಾಗಿಯೇ ಪೂರ್ಣಕ್ಕೆ ನಿನ್ನ ಹೆಸರು,

ತುಂಬಿಕೊಂಡ ಹುಣ್ಣಿಮೆಯ ಚಂದ್ರನಂತೆ
ತುಂಬಿಕೋ ಜಗತ್ತಿನ ಎಲ್ಲ ಒಳ್ಳೆಯ ಸಂಗತಿಗಳನ್ನ,
ಕತ್ತರಿಸಲಿ ನಿನ್ನ ಪರಿಪೂರ್ಣ ವಿವೇಕ
ಯಾವುದು ಕತ್ತಲೆಯೋ ಆ ಎಲ್ಲವನ್ನೂ.

ತಿಸ್ಸಾ ( ಬುದ್ಧ ಅವಳಿಗೆ ಹೇಳಿದಂತೆ )

ತಿಸ್ಸಾ,
ಯಾವುದು ಹಿಡಿದು ನಿನ್ನನ್ನು ಹಿಂದೆ ಎಳೆಯುತ್ತದೆಯೋ
ಮಂಕಾಗಬೇಡ ಅದರ ಸಾಮರ್ಥ್ಯದೆದುರು,
ಆ ಎಲ್ಲವನ್ನೂ ಹಿಂದೆ ಹಾಕಲು ಸಾಧ್ಯವಾಗುವಂತೆ
ಕಠಿಣ ಸಾಧನೆಯಲ್ಲಿ ತೊಡಗಿಕೋ,
ನಿನ್ನ ಹಿಡಿದು ಎಳೆಯುತ್ತಿರುವ ಎಲ್ಲದರಿಂದ
ಬಿಡಿಸಿಕೊಂಡಾಗಲೇ,
ಒಳಗಿನಿಂದ ಹೊರಗೆ ಚಿಮ್ಮಲು ಹಾತೆರೆಯುತ್ತಿರುವ
ಭ್ರಷ್ಟತೆಗೆ ಯಾವ ಅವಕಾಶವೂ ಇಲ್ಲದಂತೆ
ಈ ಜಗತ್ತಿನಲ್ಲಿ ಬದುಕುವ ಸಾಧ್ಯತೆ ನಿನಗೆ.

Leave a Reply