ನೀವು ಯಾರನ್ನಾದರೂ ಪ್ರೀತಿಸಿ ಅವರು ಇರುವುದನ್ನೇ ಲೆಕ್ಕಿಸದೆ ಇದ್ದರೆ ಅದು ನಿಜವಾದ ಪ್ರೀತಿಯಲ್ಲ. ಅವರನ್ನು ಉದಾಸೀನ ಮಾಡುವುದು ನಿಮ್ಮ ಉದ್ದೇಶವಲ್ಲದೆ ಇರಬಹುದು. ನಿಮ್ಮ ವರ್ತನೆ, ನೋಟ, ಮಾತುಗಳಲ್ಲಿ ಅವರ ಇರುವಿಕೆಯನ್ನು ಗುರುತಿಸುವ ಲಕ್ಷಣಗಳು ಕಾಣದಿರಬಹುದು. ಪ್ರೀತಿಸುವವರನ್ನು ಗುರುತಿಸುವುದು, ಗಮನಿಸುವುದು ಮುಖ್ಯ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.13: ಭಾವ-ಸಂಬಂಧ । ನಾಲ್ಕು ಮಂತ್ರಗಳು
ಬೌದ್ಧ ಧರ್ಮದಲ್ಲಿ ಮಂತ್ರಗಳ ಬಗ್ಗೆ ಹೇಳುತ್ತೇವೆ. ಮಂತ್ರವೆಂಬುದೊಂದು ಸೂತ್ರ, ಫಾರ್ಮುಲಾ. ಮಂತ್ರದ ಸೂತ್ರವನ್ನೊಮ್ಮೆ ನುಡಿದರೆ ಅದರಿಂದ ಸಂದರ್ಭ, ಮನಸ್ಸು, ದೇಹ ಅಥವಾ ವ್ಯಕ್ತಿಯಲ್ಲಿ ಬದಲಾವಣೆಯಾಗುತ್ತದೆ. ಹಾಗೆ ಆಗಬೇಕಾದರೆ ಮೈ ಮನಸುಗಳು ಒಂದಿಷ್ಟೂ ಬಿರುಕಿಲ್ಲದೆ ಒಂದಾದ ಸ್ಥಿತಿಯಲ್ಲಿ, ಅಚಲವಾದ ಗಮನದೊಂದಿಗೆ ಮಂತ್ರವನ್ನು ನುಡಿಯುವುದು ಮುಖ್ಯ. ಆ ಸ್ಥಿತಿಯಲ್ಲಿ ಆಡಿದ ಮಾತೆಲ್ಲವೂ ಮಂತ್ರವೇ ಆಗುವುದು.
ಬಹಳ ಪರಿಣಾಮ ಬೀರುವ ನಾಲ್ಕು ಮಂತ್ರಗಳನ್ನು ನಿಮಗೆ ಹೇಳಿಕೊಡುತ್ತೇನೆ. ಇವು ಸಂಸ್ಕೃತದಲ್ಲಿಲ್ಲ, ಟಿಬೆಟನ್ ಭಾಷೆಯಲ್ಲೂ ಇಲ್ಲ, ನೀವು ಆಡುವ ನುಡಿಯಲ್ಲೇ ಇವೆ-ʻನಾನು ಈಗ ಇಲ್ಲಿ ನಿನ್ನೊಡನೆ ಇರುವೆʼ ಎಂದು ನಿಮ್ಮ ಪ್ರಿಯ ವ್ಯಕ್ತಿಗೆ ಹೇಳುವುದು. ನಿಮ್ಮ ಮೈ ಮನಸುಗಳು ಒಗ್ಗೂಡಲು ಕೆಲವು ನಿಮಿಷಗಳ ಕಾಲ ಗಮನ ತುಂಬಿದ ಉಸಿರಾಟ ಬೇಕಾಗುತ್ತದೆ. ಎಚ್ಚರದ ಗಮನದೊಂದಿಗೆ, ನಿಮ್ಮ ನುಡಿಯ ಮೇಲೆಯೇ ಮನಸನಿರಿಸಿ, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ʻನಾನು ಈಗ ಇಲ್ಲಿ ನಿನ್ನೊಡನೆ ಇರುವೆʼ ಎಂದುಹೇಳಿ. ನಿಮ್ಮ ಮೈ ಮನಸುಗಳೆರಡೂ ಈ ಮಂತ್ರವನ್ನು ಹೇಳಬೇಕು. ಆಗ ನಡೆಯುವ ಬದಲಾವಣೆಯನ್ನು ನೋಡಿ.
ಪ್ರೀತಿಸುವವರೊಡನೆ ʻಅಲ್ಲಿʼ ಇರುವುದು ಮೊದಲನೆಯ ಹೆಜ್ಜೆ. ಅಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದಾರೆ ಎಂದು ಗುರುತಿಸುವುದು ಎರಡನೆಯ ಹೆಜ್ಜೆ. ಪ್ರೀತಿಸುವುದೆಂದರೆ ಗುರುತಿಸುವುದು. ನಮ್ಮನ್ನು ಇತರರು ಪ್ರೀತಿಸುವುದೆಂದರೆ ನಮ್ಮನ್ನು ಅವರು ಗುರುತಿಸುವುದು. ನೀವು ಯಾರನ್ನಾದರೂ ಪ್ರೀತಿಸಿ ಅವರು ಇರುವುದನ್ನೇ ಲೆಕ್ಕಿಸದೆ ಇದ್ದರೆ ಅದು ನಿಜವಾದ ಪ್ರೀತಿಯಲ್ಲ. ಅವರನ್ನು ಉದಾಸೀನ ಮಾಡುವುದು ನಿಮ್ಮ ಉದ್ದೇಶವಲ್ಲದೆ ಇರಬಹುದು. ನಿಮ್ಮ ವರ್ತನೆ, ನೋಟ, ಮಾತುಗಳಲ್ಲಿ ಅವರ ಇರುವಿಕೆಯನ್ನು ಗುರುತಿಸುವ ಲಕ್ಷಣಗಳು ಕಾಣದಿರಬಹುದು. ಪ್ರೀತಿಸುವವರನ್ನು ಗುರುತಿಸುವುದು, ಗಮನಿಸುವುದು ಮುಖ್ಯ. ಅದು ದಿನಕ್ಕೆ ಹಲವು ಬಾರಿಯಾದರೂ ವ್ಯಕ್ತವಾಗಬೇಕು.
ಈ ಗುರಿಯನ್ನು ಸಾಧಿಸಲು ನಾವು ಮೈ ಮನುಸಗಳನ್ನು ಒಗ್ಗೂಡಿಸುವ ಅಭ್ಯಾಸದಲ್ಲಿ ತೊಡಗಲೇಬೇಕು. ಮೂರು, ಐದು ಮತ್ತು ಏಳು ಬಾರಿ ಉಸಿರು ಎಳೆದುಕೊಳ್ಳುವ, ಬಿಡುವ ಅಭ್ಯಾಸ ಮಾಡಬೇಕು. ನಿಮ್ಮ ಪ್ರಿಯ ವ್ಯಕ್ತಿಯ ಹತ್ತಿರಕ್ಕೆ ಹೋಗಿ, ಗಮನವಿರಿಸಿ ನೋಡುತ್ತಾ, ಮುಖದಲ್ಲಿ ಹಿತವಾದ ನಗುವಿರಿಸಿಕೊಂಡು ಎರಡನೆಯ ಮಂತ್ರವನ್ನು ಹೇಳಬೇಕು. “ನೀನು ಇಲ್ಲಿರುವುದು ಗೊತ್ತು ನೀನು ಇರುವುದು ನನಗೆ ಸಂತೋಷ” ಅನ್ನಬೇಕು. ನಿಶ್ಚಲ ಗಮನದ ಎಚ್ಚರದಲ್ಲಿ ಹೀಗೆ ಹೇಳಿದಾಗ ನಿಮ್ಮ ಪ್ರೀತಿ ಪಾತ್ರ ವ್ಯಕ್ತಿ ಹೂವು ಅರಳಿದ ಹಾಗೆ ಅರಳುವುದನ್ನು ಕಾಣುತ್ತೀರಿ. ಪ್ರೀತಿಗೆ ಒಳಗಾಗುವುದು ಅಂದರೆ ನಮ್ಮನ್ನು ಯಾರೋ ಗುರುತು ಹಚ್ಚಿದ ಹಾಗೆ. ದಿನದಲ್ಲಿ ಹಲವು ಬಾರಿ ಇಂಥ ಅಭ್ಯಾಸ ಮಾಡಿ. ಇದು ನಿಜವಾದ ಧ್ಯಾನ.
ನೀವು ಪ್ರೀತಿಸುವ ವ್ಯಕ್ತಿ ನರಳುತ್ತಿರುವಾಗ, ಸಂಕಟಪಡುತ್ತಿರುವಾಗ ಮೂರನೆಯ ಮಂತ್ರವನ್ನು ಬಳಸಿ. ಗಮನವಿರಿಸಿ ಬದುಕುತಿರುವಾಗ ಈ ಕ್ಷಣದಲ್ಲಿ ನಿಮ್ಮ ಪರಿಸ್ಥಿತಿ ಏನೆಂದು ನಿಮಗೆ ಗೊತ್ತಿರುತ್ತದೆ. ಆದ್ದರಿಂದಲೇ ನೀವು ಪ್ರೀತಿಸುವರು ನೋವಿನನಿಂದ ನರಳುವುದು ನಿಮ್ಮ ಗಮನಕ್ಕೆ ಬರುತ್ತದೆ. ಅಂಥ ಹೊತ್ತಿನಲ್ಲಿ ನೀವು, ನಿಮ್ಮ ಮೈ ಮನಸುಗಳು ಪೂರ್ತಿಯಾಗಿ ಒಂದುಗೂಡಿ, ಪೂರಾ ಗಮನ ಪ್ರಿಯ ವ್ಯಕ್ತಿಯ ಮೇಲಿರುವಾಗ ಮೂರನೆಯ ಮಂತ್ರ ಹೇಳಬೇಕು: “ನೀನು ನರಳುತಿದ್ದೀಯ, ಗೊತ್ತು. ಅದಕ್ಕೇ ನಿನಗಾಗಿ ನಾನು ಇಲ್ಲಿದ್ದೇನೆ”. ಯಾಕೆಂದರೆ ನಾವು ನರಳುತ್ತಿರುವಾಗ ನಮ್ಮ ಪ್ರಿಯರಾದವರು ಇರಬೇಕು ನಮ್ಮೊಡನೆ ಎಂದು ಬಯಸುತ್ತೇವ. ಅಂಥ ಹೊತ್ತಿನಲ್ಲಿ ನಾವು ಇಷ್ಟಪಡುವವರು ಉದಾಸೀನ ಮಾಡಿದರೆ ನಮ್ಮ ನೋವು ಹೆಚ್ಚಾಗುತ್ತದೆ. ಹಾಗಾಗಿ ನಾವು ಮಾಡಬಹುದಾದದ್ದು ಒಂದೇ ಕೆಲಸ. ನಾವು, ನಮ್ಮ ಮೈ ಮನಸು ಎಲ್ಲವೂ ಆ ಕ್ಷಣದಲ್ಲಿ ನಿಜವಾಗಿಯೂ ನಮ್ಮ ಪ್ರಿಯ ವ್ಯಕ್ತಿಯೊಡನೆ ಇರಬೇಕು, ನಮ್ಮ ಮನಸು ಪೂರ್ಣ ಗಮನದ ಎಚ್ಚರದಲ್ಲಿರುವಾಗ “ನೀನು ನರಳುತಿರುವುದು ನನಗೆ ಗೊತ್ತು. ಅದಕ್ಕೇ ನಿನಗಾಗಿ ನಾನು ಇಲ್ಲಿದ್ದೇನೆ,” ಅನ್ನಬೇಕು. ನೀವು ಏನಾದರೂ ಮಾಡುವ ಮೊದಲೇ, ನೀವು ಅಲ್ಲಿದ್ದೀರಿ ಅನ್ನುವ ಕಾರಣಕ್ಕೇ ಪ್ರಿಯ ವ್ಯಕ್ತಿಯ ನೋವು ಕಡಿಮೆಯಾಗುತ್ತದೆ. ನಿಮ್ಮ ಇರುವಿಕೆಯೇ, ನೀವು ಅವರ ನೋವನ್ನು ಅರ್ಥಮಾಡಿಕೊಂಡದ್ದೇ ಒಂದು ಪವಾಡವಾಗಿ ಅವರಿಗೆ ತಟ್ಟನೆ ನಿರಾಳವಾದ ಭಾವ ಮೂಡುತ್ತದೆ. ಅವರ ಬಗ್ಗೆ ನಿಮಗಿರುವ ಪ್ರೀತಿಯೇ ಇದನ್ನು ಆಗಮಾಡಿಸುತ್ತದೆ.
ನಾಲ್ಕನೆಯ ಮಂತ್ರವನ್ನು ಅನುಷ್ಠಾನ ಮಾಡುವುದು ಕಷ್ಟ. ನೀವು ಈ ಜಗತ್ತಿನಲ್ಲಿ ತುಂಬ ಪ್ರೀತಿಸುವ ವ್ಯಕ್ತಿಯಿಂದಲೇ ನಿಮಗೆ ನೋವಾಗಿದೆ, ನರಳುತ್ತಿದ್ದೀರಿ ಎಂದು ನಿಮಗೆ ಅನಿಸಿರುವ ಪ್ರಸಂಗ ಇದು. ಬೇರೆ ಯಾರಾದರೂ ಹೀಗೆ ನಡೆದುಕೊಂಡಿದ್ದರೆ ಇಷ್ಟು ನೋವಾಗುತ್ತಿರಲಿಲ್ಲ ಅನಿಸುತ್ತಿರುತ್ತದೆ. ಇವರೇ ನನ್ನ ಬಗ್ಗೆ ಹೀಗೆ ಮಾತಾಡಿದ್ದು, ಹೀಗೆಲ್ಲ ಮಾಡಿದ್ದು ಅನ್ನಿಸಿ, ರೂಮಿನ ಬಾಗಿಲು ಹಾಕಿಕೊಂಡು ಒಬ್ಬರೇ ಇರಬೇಕು, ಅತ್ತುಬಿಡಬೇಕು ಎಂದೆಲ್ಲ ಅನಿಸುತ್ತದೆ. ಇಂತ ಹೊತ್ತಿನಲ್ಲಿ ನಮ್ಮೊಳಗಿರುವ ಹೆಮ್ಮೆ, ನಾನತ್ವಗಳು ಅಡ್ಡಿಯಾಗುತ್ತವೆ. ಬುದ್ಧ ಹೇಳುವುದು ಏನೆಂದರೆ ನಿಜವಾದ ಪ್ರೀತಿಯಲ್ಲಿ ಹೆಮ್ಮೆಗೆ, ಅಹಂಕಾರಕ್ಕೆ, ನಾನುತನಕ್ಕೆ ಜಾಗವಿಲ್ಲ.
ನೀವು ನರಳುತಿರುವಾಗ, ಆ ನರಳಾಟಕ್ಕೆ ಕಾರಣವಾದ ಪ್ರಿಯ ವ್ಯಕ್ತಿಯ ಬಳಿಗೇ ಹೋಗಿ, ಸಹಾಯವನ್ನು ಕೋರಬೇಕು. ನಿಮ್ಮ ಪ್ರೀತಿ ನಿಜವಾದದ್ದೇ ಆಗಿದ್ದರೆ ನಿಮ್ಮ ನೋವಿಗೆ ಕಾರಣವೆಂದು ನೀವು ಭಾವಿಸಿರುವ ಪ್ರಿಯ ವ್ಯಕ್ತಿಯ ಬಳಿಗೇ ಹೋಗಿ “ನೋಯುತಿದ್ದೇನೆ, ನರಳುತಿದ್ದೇನೆ, ಸಹಾಯ ಬೇಕು,” ಎಂದು ಕೇಳಬೇಕು. ನಿಮ್ಮ ಮೈಮನಸುಗಳನ್ನು ಒಂದುಗೂಡಿಸಿಕೊಂಡು ಈ ಮಂತ್ರವನ್ನು ಅನೇಕಸಲ ಹೇಳಿಕೊಂಡು, ಪ್ರಿಯ ವ್ಯಕ್ತಿಯ ಬಳಗೆ ಹೋಗಿ, “ಡಿಯರ್, ನರಳುತಿದ್ದೇನೆ, ಪ್ಲೀಸ್, ಸಹಾಯಮಾಡುʼ ಅನ್ನಬೇಕು. ಇದೇ ನಾಲ್ಕನೆಯ ಮಂತ್ರ.
*
೧ ಮೈ ಮನಸುಗಳು ಒಂದಾದ ಸ್ಥಿತಿಯಲ್ಲಿ ಪ್ರೀತಿಯನ್ನು ನಿವೇದಿಸುವುದು ಅಕ್ಕಮಹಾದೇವಿಯವರ ಈ ವಚನ
ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ
ಕಾಯದ ಸುಖವ ನಾನೇನೆಂದರಿಯೆನು.
ಆರು ಸೋಂಕಿದರೆಂದರಿಯೆನು.
ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ
ಹೊರಗೇನಾಯಿತ್ತೆಂದರಿಯೆನು.
೨. ನಾನು ಒಂಟಿತನದಲ್ಲಿ ನರಳುತಿರುವೆ, ನನ್ನತ್ತ ಗಮನ ಹರಿಸು, ನಿನ್ನ ನೆರವು ಬೇಕು ಎಂದು ಕೋರುವ ಬಸವ ವಚನ
ಜಜ್ಜನೆ ಜರಿದೆನು
ಜಜ್ಜನೆ ಜರಿದೆನು
ಜಜ್ಜನೆ ಜರಿದೆ ನೋಡಯ್ಯಾ
ಬಿಬ್ಬನೆ ಬಿರಿದೆನು
ಬಿಬ್ಬನೆ ಬಿರಿದೆನು
ಬಿಬ್ಬನೆ ಬಿರಿದೆ ನೋಡಯ್ಯಾ
ನಾನೊಬ್ಬನೆ ಉಳಿದೆನು
ನಾನೊಬ್ಬನೆ ಉಳಿದೆನು
ನಾನೊಬ್ಬನೆ ಉಳಿದೆ ನೋಡಯ್ಯಾ.
ಕೂಡಲಸಂಗಮದೇವಾ

