ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಒಂದು ಹೊಳೆ ವಿಶಾಲವಾದ ಮರುಭೂಮಿಯ ಅಂಚಿಗೆ ಬಂದು ತಲುಪಿತು. ಅದು ಬೆಟ್ಟಗಳನ್ನು, ಕಣಿವೆಗಳನ್ನು, ಕಾಡುಗಳನ್ನು ದಾಟಿಕೊಂಡು ಬಂದಿತ್ತು. ಆದರೆ ಇಲ್ಲಿ ಮಾತ್ರ ಅದಕ್ಕೆ ಮುಂದಕ್ಕೆ ಸಾಗುವುದು ಸಾಧ್ಯವಾಗಲಿಲ್ಲ. ಎಷ್ಟೇ ವೇಗವಾಗಿ ಮರಳಿನೊಳಗೆ ಹರಿಯಲು ಪ್ರಯತ್ನಿಸಿದರೂ, ಅದು ಮರಳಿನಲ್ಲಿ ಲೀನವಾಗಿ ಮಾಯವಾಗುತ್ತಿತ್ತು. ಹೊಳೆ ನಿರಾಶೆಯಿಂದ ನಿಂತಿದ್ದಾಗ, ಅದಕ್ಕೆ ಒಂದು ಮೃದುವಾದ ಧ್ವನಿ ಕೇಳಿಸಿತು:
“ಗಾಳಿಗೆ ನಿನ್ನನ್ನು ಹೊತ್ತುಕೊಂಡು ಹೋಗಲು ಬಿಡು.”
ಹೊಳೆ ವಿರೋಧಿಸಿತು.
“ನಾನು ನನ್ನನ್ನು ಬಿಟ್ಟುಕೊಟ್ಟರೆ, ನಾನು ಯಾರು ಎನ್ನುವುದನ್ನೇ ಕಳೆದುಕೊಳ್ಳುತ್ತೇನೆ.”
ಅದಕ್ಕೆ ಮರುಭೂಮಿ ಉತ್ತರಿಸಿತು:
“ನೀನು ನಿನ್ನ ಸಾರವನ್ನು ಕಳೆದುಕೊಳ್ಳುವುದಿಲ್ಲ. ಬದಲಾಗುವುದು ನಿನ್ನ ರೂಪ ಮಾತ್ರ.”
ಆಗ ಗಾಳಿ, ಆ ಹೊಳೆಯನ್ನು ಆವಿಯ ರೂಪದಲ್ಲಿ ಮೇಲಕ್ಕೆತ್ತಿ, ಮರುಭೂಮಿಯ ಆಚೆಗೆ ಕೊಂಡೊಯ್ದು, ಮಳೆಯಾಗಿ ಸುರಿಯುವಂತೆ ಮಾಡಿತು. ಮತ್ತೆ ಅದು ನದಿಯಾಗಿ ಹರಿಯತೊಡಗಿತು. ಹಿಂದಿಗಿಂತಲೂ ಹೆಚ್ಚು ಬಲಶಾಲಿಯಾಗಿ, ಹೆಚ್ಚು ವಿವೇಕದಿಂದ, ತನ್ನ ಪ್ರಯಾಣವನ್ನು ಮುಂದುವರಿಸುವ ಸಾಮರ್ಥ್ಯದೊಂದಿಗೆ.
ಈ ಕಥೆಯ ಸಂದೇಶವೇನು?
ಜೀವನವು ಕೆಲವೊಮ್ಮೆ ನಮ್ಮನ್ನು ಅಂತಹ ಮರುಭೂಮಿಗಳ ಮುಂದೆ ತಂದು ನಿಲ್ಲಿಸುತ್ತದೆ; ಅಲ್ಲಿ ಹೆಚ್ಚು ಶ್ರಮ, ಹೆಚ್ಚು ನಿಯಂತ್ರಣ ಅಥವಾ ಹೆಚ್ಚು ಪ್ರತಿರೋಧದಿಂದ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಿಜವಾದ ಶಕ್ತಿ ಇರುವುದು, ಇನ್ನಷ್ಟು ಬಲವಾಗಿ ಮುನ್ನುಗ್ಗುವುದರಲ್ಲಿ ಅಲ್ಲ ; ಬದಲಾಗಿ ಪ್ರಕ್ರಿಯೆಗೆ ನಮ್ಮನ್ನು ನಾವು ಒಪ್ಪಿಸಿಕೊಳ್ಳುವುದರಲ್ಲಿ, ಕಾಣದ ಶಕ್ತಿಯ ಮೇಲೆ ವಿಶ್ವಾಸವಿಡುವುದರಲ್ಲಿ ಮತ್ತು ರೂಪಾಂತರಕ್ಕೆ ಅವಕಾಶ ನೀಡುವುದಲ್ಲಿದೆ.
ಬದಲಾವಣೆಗೆ ನಾವು ಭಯಪಡುತ್ತೇವೆ. ಏಕೆಂದರೆ ನಮ್ಮ ಇಂದಿನ ರೂಪವೇ ನಮ್ಮ ನಿಜವಾದ ಗುರುತು ಎಂದು ತಪ್ಪಾಗಿ ಭಾವಿಸಿರುತ್ತೇವೆ. ಆದರೆ ನಮ್ಮ ನಿಜವಾದ ಸಾರ ಎಂದಿಗೂ ನಾಶವಾಗುವುದಿಲ್ಲ. ಬೆಳವಣಿಗೆ ಎಂದರೆ ನಮಗೆ ಪರಿಚಿತವಾದುದನ್ನು ಬಿಡಲು ಸಿದ್ಧರಾಗುವುದು, ಇದರಿಂದ ನಾವು ನಿಜವಾಗಿಯೂ ಆಗಬೇಕಾಗಿದ್ದ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.
ನಿಮ್ಮನ್ನು ನೀವು ಕೇಳಿಕೊಳ್ಳಿ:
ನಿಮ್ಮ ಜೀವನದ ಯಾವ ಕ್ಷೇತ್ರದಲ್ಲಿ ನೀವು ಹೊಳೆಯಂತೆ ಮರುಭೂಮಿಯನ್ನು ಬಲವಂತವಾಗಿ ದಾಟಲು ಪ್ರಯತ್ನಿಸುತ್ತಿದ್ದೀರಿ? ಆದರೆ ವಾಸ್ತವದಲ್ಲಿ ಗಾಳಿಯ ಮೇಲೆ ವಿಶ್ವಾಸವಿಡುವಂತೆ ಜೀವನವೇ ನಿಮ್ಮನ್ನು ಆಹ್ವಾನಿಸುತ್ತಿದೆ? ಕೆಲವೊಮ್ಮೆ ಸಮರ್ಪಣೆ ಎನ್ನುವುದು ಸೋಲು ಅಲ್ಲ. ಅದು ನಾವು ಆಗಬೇಕಾದವರಾಗಿ ರೂಪುಗೊಳ್ಳುವ ಹೊಸ ಆರಂಭ.
********************************

