ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ತತ್ವಜ್ಞಾನಿ ಮಾರ್ಕ್ ರೋಲ್ಯಾಂಡ್ಸ್ ಅವರು ತಮ್ಮ Running with the Pack ಎನ್ನುವ ಪುಸ್ತಕದಲ್ಲಿ ವಿವರಿಸಿರುವ “ಶೋಪೆನ್ಹೌರ್ನ ಬಸ್ ಪ್ರಯಾಣ” ಎನ್ನುವುದು ಮನಸ್ಸಿಗೆ ತಟ್ಟುವ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವ ಒಂದು ಚಿಂತನಾ ಪ್ರಯೋಗವಾಗಿದೆ.
ಒಮ್ಮೆ ಊಹಿಸಿಕೊಳ್ಳಿ, ನೀವು ಅತ್ಯಂತ ಅಹಿತಕರವಾದ ಬಸ್ ಪ್ರಯಾಣವೊಂದರಲ್ಲಿ ಸಿಲುಕಿಕೊಂಡಿದ್ದೀರಿ.
ಬಸ್ನಲ್ಲಿ ಅಸಹನೀಯ ಎನ್ನುವಷ್ಟು ಬಿಸಿಯಿದೆ. ಬಸ್ನ ಹಿಂಭಾಗದಲ್ಲಿರುವ ಶೌಚಾಲಯ ಕಟ್ಟಿಕೊಂಡಿದೆ, ಮತ್ತು ದುರ್ವಾಸನೆ ಬೀರುತ್ತಿದೆ. ನಿಮ್ಮ ದೇಹದಾದ್ಯಂತ ಬೆವರು ಹರಿಯುತ್ತಿದೆ. ಕೆಸರಿನಿಂದ ಕೂಡಿದ ರಸ್ತೆಯ ಪ್ರತಿಯೊಂದು ಗುಂಡಿಯಲ್ಲೂ ಬಸ್ ಜಿಗಿದು-ಜಿಗಿದು ಸಾಗುತ್ತಿದೆ; ನೀವು ಕೂಡ ಅದರೊಂದಿಗೆ ಮೇಲಕ್ಕೆ-ಕೆಳಕ್ಕೆ ಅಲುಗಾಡುತ್ತಿದ್ದೀರಿ.
ನಿಮ್ಮ ಸುತ್ತಲಿರುವ ಜನರು ವಿಚಿತ್ರವಾದ, ಅಸಂಬದ್ಧ ಕಥೆಗಳನ್ನು ಕಟ್ಟಿಕೊಂಡು ಮಾತನಾಡುತ್ತಿದ್ದಾರೆ. ಎಲ್ಲೆಡೆ ಜಗಳ, ಕೂಗಾಟ ಮತ್ತು ವಾಗ್ವಾದಗಳು ನಡೆಯುತ್ತಿವೆ. ಇಡೀ ಬಸ್ ದುಃಖಕರವಾದ, ನರಕಸದೃಶವಾದ ಸ್ಥಳವಾಗಿ ಕಾಣುತ್ತಿದೆ.
ಆಗ ನೀವು , ಕಣ್ಣಿನ ಮೂಲೆಯಿಂದ ಯಾರೋ ನಿಮ್ಮನ್ನೇ ನೋಡುತ್ತಿರುವುದನ್ನು ಗಮನಿಸುತ್ತೀರಿ.
ಅವರ ಕಣ್ಣುಗಳಲ್ಲಿ ನಿಮಗೆ ನಿಮ್ಮದೇ ನೋವು ಕಾಣುತ್ತದೆ. ನಿಮಗಿರುವ ಅದೇ ವೇದನೆ, ಅದೇ ಭಯ, ಅದೇ ಅಸಹ್ಯ ಅದೇ ಅಸಹಾಯಕತೆ ಮತ್ತು ನಿರಾಶೆ.
ಆ ಕ್ಷಣದಲ್ಲಿ ನಿಮಗೆ ಒಂದು ಸತ್ಯದ ಅರಿವಾಗುತ್ತದೆ, ಇಲ್ಲಿರುವ ಪ್ರತಿಯೊಬ್ಬರೂ ಇದೇ ಸ್ಥಿತಿಯಲ್ಲಿದ್ದಾರೆ.
ಎಲ್ಲರೂ ದುಃಖದಲ್ಲಿದ್ದಾರೆ. ಎಲ್ಲರೂ ಯಾವುದೋ ರೀತಿಯಲ್ಲಿ ನರಳುತ್ತಿದ್ದಾರೆ.
ಶೋಪೆನ್ಹೌರ್ ಪ್ರಕಾರ, ಈ ಅರಿವು ನಮಗೆ ಎರಡು ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತದೆ.
ಮೊದಲನೆಯದು, ನಮ್ಮ ದುಃಖದಲ್ಲಿ ನಾವು ಒಂಟಿಯಲ್ಲ ಎನ್ನುವ ಅರಿವು. ನಾವು ಮಾತ್ರ ನರಳುತ್ತಿಲ್ಲ. ನಮ್ಮ ಸುತ್ತಲೂ ನಮ್ಮಂತೆಯೇ ನೋವನ್ನು ಅನುಭವಿಸುತ್ತಿರುವ ಜನರಿದ್ದಾರೆ. ನಮ್ಮೊಂದಿಗೆ ಈ ದುಃಖವನ್ನು ಹಂಚಿಕೊಳ್ಳುತ್ತಿರುವ ಸಹಪ್ರಯಾಣಿಕರಿದ್ದಾರೆ ಎನ್ನುವ ತಿಳುವಳಿಕೆ. ಈ ಅರಿವು ನಮ್ಮ ದುಃಖವನ್ನು ಸ್ವಲ್ಪ ಹೆಚ್ಚು ಸಹನೀಯವಾಗಿಸುತ್ತದೆ. ನಾವು ನಮ್ಮ ದುಃಖದಲ್ಲಿ ಒಂಟಿಯಲ್ಲ. ನಮ್ಮೊಂದಿಗೆ ದುಃಖಿಸುತ್ತಿರುವ ಸಂಗಾತಿಗಳಿದ್ದಾರೆ.
ಎರಡನೆಯದು, ಇದು ಇತರರನ್ನು ಕ್ಷಮಿಸಲು ನಮಗೆ ಅವಕಾಶ ನೀಡುತ್ತದೆ. ಇತರರಲ್ಲಿರುವ ದೋಷಗಳು, ವಿಚಿತ್ರ ವರ್ತನೆಗಳು ಮತ್ತು ತಪ್ಪುಗಳನ್ನು ನಾವು ನೋಡುವಾಗ, ಅವರನ್ನು ಕೇವಲ “ತಪ್ಪು ಮಾಡುವ ಜನರು” ಎಂದು ನೋಡುವ ಬದಲು, ಭಯದಿಂದ ಬೆಚ್ಚಿಬಿದ್ದಿರುವ, ಗೊಂದಲದಲ್ಲಿರುವ ಮನುಷ್ಯರಾಗಿ ನೋಡಲು ಪ್ರಾರಂಭಿಸುತ್ತೇವೆ. ಅವರು ಕೂಡ ನಮ್ಮಂತೆಯೇ ಈ ಕಠಿಣ ಜಗತ್ತನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ. ನಾವೆಲ್ಲರೂ ಒಮ್ಮೆ ಮಕ್ಕಳು, ಈಗ ದೊಡ್ಡವರಾಗಿದ್ದೇವೆ. ಆದರೆ ಈ ಜಗತ್ತನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಕಲಿಯುತ್ತಲೇ ಇದ್ದೇವೆ.
ನಾನು ನನ್ನ ರೀತಿಯಲ್ಲಿ ನಿಭಾಯಿಸುತ್ತಿದ್ದೇನೆ. ನೀನು ನಿನ್ನ ರೀತಿಯಲ್ಲಿ ನಿಭಾಯಿಸುತ್ತಿದ್ದೀಯ. ನಾವೆಲ್ಲರೂ ನಮಗೆ ಸಾಧ್ಯವಾದಷ್ಟು ಈ ಜೀವನವನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಈ ಅರಿವಿನೊಂದಿಗೆ ಕ್ಷಮೆ ಹುಟ್ಟುತ್ತದೆ.
ನಾವು ಇತರರನ್ನು ಕ್ಷಮಿಸಬಹುದು. ಮತ್ತು ಅದೇ ರೀತಿಯಲ್ಲಿ ನಮ್ಮನ್ನೂ ನಾವು ಕ್ಷಮಿಸಿಕೊಳ್ಳಬಹುದು.
ಜೀವನ ಕಷ್ಟಕರವಾಗಿದೆ. ಜೀವನವು ನೋವು ಮತ್ತು ದುಃಖಗಳಿಂದ ತುಂಬಿದೆ. ಆದರೆ ಕನಿಷ್ಠ ಒಂದು ಸಮಾಧಾನವಿದೆ. ನಾವು ಈ ದುಃಖವನ್ನು ಒಬ್ಬೊಬ್ಬರಾಗಿ ಅನುಭವಿಸುತ್ತಿಲ್ಲ. ನಾವೆಲ್ಲರೂ ಒಂದೇ ಬಸ್ಸಿನ ಪ್ರಯಾಣಿಕರು. ನಾವೆಲ್ಲರೂ ನಮ್ಮದೇ ರೀತಿಯಲ್ಲಿ ನರಳುತ್ತಿದ್ದೇವೆ. ನಾವೆಲ್ಲರೂ ನಮ್ಮದೇ ರೀತಿಯಲ್ಲಿ ಬದುಕಲು ಪ್ರಯತ್ನಿಸುತ್ತಿದ್ದೇವೆ. ಮತ್ತು ಬಹುಶಃ, ಈ ಅರಿವೇ ನಮ್ಮನ್ನು ಪರಸ್ಪರರ ಬಗ್ಗೆ ಸ್ವಲ್ಪ ಹೆಚ್ಚು ಕರುಣೆಯುಳ್ಳವರನ್ನಾಗಿ ಮಾಡಬಹುದು.
ಜೀವನ ಕಠಿಣ, ಜೀವನದಲ್ಲಿ ದುಃಖವಿದೆ. ಆದರೆ ಕನಿಷ್ಠ ನಾವೆಲ್ಲರೂ ಈ ದುಃಖವನ್ನು ಒಟ್ಟಾಗಿ ಅನುಭವಿಸುತ್ತಿದ್ದೇವೆ.

