ಅರಳಿಬಳಗ ಗುಂಪಿನಲ್ಲಿ “ಆಧ್ಯಾತ್ಮಿಕ ನಾಸ್ತಿಕತೆ ಕುರಿತು ನಡೆದ ಚರ್ಚೆಯ ಆಯ್ದ ಅಭಿಪ್ರಾಯಗಳು ಇಲ್ಲಿವೆ. (ಆಧ್ಯಾತ್ಮಿಕ ನಾಸ್ತಿಕತೆ ಕುರಿತ ಲೇಖನ ಇಲ್ಲಿದೆ : https://aralimara.com/2018/03/09/spiritual/ ) ಆಸಕ್ತರು ನಿಮ್ಮ ಅಭಿಪ್ರಾಯಗಳನ್ನೂ ದಾಖಲಿಸಬಹುದು. ವೈಚಾರಿಕವಾಗಿ ವಾದ ಮಂಡಿಸುವಾಗ ಸಾಧ್ಯವಾದಷ್ಟೂ ಶ್ರದ್ಧಾವಂತರಿಗೆ ಘಾಸಿಯಾಗುವ ಭಾಷೆಯನ್ನು ಅವಾಯ್ಡ್ ಮಾಡಲು, ರಾಜಕಾರಣವನ್ನು ನಡುವೆ ತರದಿರಲು ವಿನಮ್ರ ವಿನಂತಿ ~ ಅರಳಿ ಬಳಗ
ಚರ್ಚೆಗೆ ಚಾಲನೆ:
ಅಧ್ಯಾತ್ಮ , ಸ್ವ ಅರಿವಿನ ಪ್ರಕ್ರಿಯೆ. ಧರ್ಮ, ಈ ಅರಿವನ್ನು ಪಡೆಯಲು ಅನುಸರಿಸುವ ಒಂದು ಹಾದಿ. ಧಾರ್ಮಿಕರಾಗದೆ ಇದ್ದವರೂ ಕೂಡ ತಮ್ಮನ್ನು ತಾವು ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದನ್ನು, ಮಾಡುತ್ತಿರುವುದನ್ನು ನಾವು ಸಾಕಷ್ಟು ನೋಡಿದ್ದೇವೆ. ವಿಚಾರ, ತರ್ಕ, ಕಲಾ ಪ್ರಕಾರಗಳ ಮೂಲಕವೆಲ್ಲ ಅಧ್ಯಾತ್ಮವನ್ನು ದಕ್ಕಿಸಿಕೊಂಡವರು ಇದ್ದಾರೆ. ಅಧ್ಯಾತ್ಮಕ್ಕೂ ದೇವರಿಗೂ ಸಂಬಂಧವಿಲ್ಲ. ಆದರೆ ಧರ್ಮಕ್ಕೂ ದೇವರಿಗೂ ಸಂಬಂಧವಿದೆ. ಆದ್ದರಿಂದ ಧಾರ್ಮಿಕ ಮನೋವೃತ್ತಿಯ ಎಲ್ಲರೂ ಆಸ್ತಿಕರೇ. ಆದರೆ ಆಧ್ಯಾತ್ಮಿಕ ಮನೋಭಾವದ ವ್ಯಕ್ತಿಗಳು ಆಸ್ತಿಕರಾಗಿಯೇ ಇರಬೇಕೆಂದಿಲ್ಲ.
ಅಭಿಪ್ರಾಯ 1:
ನಿಜ ಎರಡಕ್ಕೂ ಸಂಬಂಧ ದೂರದ್ದು. ಆದರೆ ಈ ಮೊದಲು ಧರ್ಮ ಸ್ವಯಂ ಅರಿವಿನ ಪ್ರಕ್ರಿಯೆಯೇ ಆಗಿತ್ತು. ಆದರೆ ಮನುಷ್ಯನ ಆಲೋಚಗಳು ಸ್ವಯಂ ಅರಿವಿನ ಸಾಧನವಾಗಿದ್ದ ಧರ್ಮವನ್ನು ನಿಯಮ, ಚೌಕಟ್ಟಿನೊಳಗೆ ತೂರಿಸಿ ಕ್ಲಿಷ್ಟವಾಗಿಸಿದ ಕಾರಣ ಆಧ್ಯಾತ್ಮ ನಮಗೆ ಅಸಾಧ್ಯ ಎನಿಸಲು ಕಾರಣವಾಗಿತ್ತು. ಆಧ್ಯಾತ್ಮ ಅಂತರಂಗದ ಶೋಧನೆಗೆ ಒಂದು ಮಾಧ್ಯಮ. ಇದಕ್ಕೆ ದೇವರ, ದೈವಿಕತೆ ಎಂಬ ಮಧ್ಯಸ್ತಿಕೆ ಬೇಡುವುದಿಲ್ಲ.
~ ಮಿಂಚು
ಅಭಿಪ್ರಾಯ 2 :
ವಿಜ್ಞಾನಿಯದ್ದು ಕರ್ಮ ಮಾರ್ಗವಾದರೆ, ದೇವರಲ್ಲಿ ನಂಬಿಕೆ ಇರುವವನದ್ದು ಭಕ್ತಿ ಮಾರ್ಗ, ನಂಬಿಕೆ ಇಲ್ಲದವರದ್ದು ಕೇವಲ ಧ್ಯಾನ ಮಾರ್ಗವಾಗಿರಬಹುದು.
ಮಾರ್ಗ ಬೇರೆ ತಲುಪುವ ಗುರಿ ಒಂದೇ -ಅಧ್ಯಾತ್ಮ .
~ ಅಖಂಡಾದ್ವೈತಿ
ಅಭಿಪ್ರಾಯ 3 :
ಯದ್ಭಾವಮ್ ತದ್ಭವತಿ ಅನ್ನೋ ಹಾಗೆ ದೇವರ ಕಲ್ಪನೆ ಕೂಡ ನಾವು ಅನುಸರಿಸುವ ದಾರಿ ಸಾಧನಾ ಮಾರ್ಗ ಬೇರೆ ಬೇರೆ ಆದರೂ ಅವನ ಇರುವಿಕೆ ಮಾತ್ರ ನಮಗೆ ಗೋಚರಿಸುತ್ತದೆ ಅದೇ ದೇವರ ಸ್ವರೂಪ ನಾವು ಪೂಜಿಸುವ ಮತ್ತು ಆರಾಧಿಸುವ ಕಾರ್ಯ ಕಾರಣದ ಮೇಲೆ ದೇವನ ರೂಪ ಆಕರ ಅವನ ಅಸ್ತಿತ್ವ ಗೋಚರಿಸುತ್ತದೆ.
ಒಬ್ಬರಿಗೆ ಶಿವನಾಗಿ ಇನ್ನೊಬ್ಬರಿಗೆ ಬ್ರಹ್ಮನಾಗಿ ಇನ್ಯಾರಿಗೋ ವಿಷ್ಣುವಾಗಿ ಮತ್ತೆ ಕೆಲವರಿಗೆ ರಾಮನಾಗಿ ಅಲ್ಲಾ, ಯೇಸು ಹೀಗೆ ನಾವು ನೋಡುವ ಮತ್ತು ಸಾಧನಾ ಪ್ರಮಾನವಾಗಿ ಅವನ ರೂಪ ಬಲಗೊಳ್ಳುತ್ತದೆ.
~ ಪಂಚಾಕ್ಷರಯ್ಯ
ಅಭಿಪ್ರಾಯ 4 :
ವಿಜ್ಞಾನಿಗೆ ದೇವರ ಹಂಗಿಲ್ಲ. ಆತನ ಕರ್ಮವೇ ಆತನ ಧ್ಯಾನ ನಂಬಿಕೆ ಆಧ್ಯಾತ್ಮ ವಾಗಿರಬಹುದು. ಅಥವ ಆತನಿಗೆ ಕರ್ಮವೇ ಅಂತಿಮ ಧ್ಯೇಯ. (ಧ್ಯಾನ ನಂಬಿಕೆ ಆಧ್ಯಾತ್ಮ ಅಂತ ನಾವು ಸುಮ್ಮನೆ ಆರೋಪಿಸಬಹುದೇನೋ?)
ಇನ್ನು ದೇವರಲ್ಲಿ ನಂಬಿಕೆ ಇರುವವರದ್ದು ಭಕ್ತಿ ಮಾರ್ಗ ಅನ್ನುವಾಗ ಭಕ್ತಿ ಅಂದ್ರೇನು ಅದು ಎಲ್ಲಿರುತ್ತೆ ಹೇಗಿರುತ್ತೆ ಅದರಿಂದ ಜೀವನದಲ್ಲಾಗುವ ಪ್ರಯೋಜನವೇನು?ಇತರರಿಗಾಗುವ ಪ್ರಯೋಜನವೇನು?ಅಂತೆಲ್ಲಾ ಪ್ರಶ್ನೆ ಉಧ್ಭವಿಸದೆ?
~ ರಹೀನಾ
ಅಭಿಪ್ರಾಯ 5 :
ಸತ್ಯಕ್ಕೆ ಆಸ್ತಿಕರು ನಾಸ್ತಿಕರು ಎಂಬ ಭೇದವಿಲ್ಲ.ಆದರೆ ಅದನ್ನು ಅರಿಯುವ ಹಾದಿಗೆ ಇದೆ.ಈ ಬದಲಾಗುತ್ತಿರುವ ಜಗತ್ತಿನ ಹಿಂದೆ ಎಂದೂ ಬದಲಾಗದ್ದು ಒಂದಿರಬೇಕು.ಈ ಎಲ್ಲಾ ಪ್ರಕ್ರಿಯೆಗಳಿಗೆ ಒಂದು ಮೂಲ ಕಾರಣವಿರಬೇಕು,ಅದನ್ನು ನಾನು ಅರಿಯಬಹುದು,ಅದನ್ನು ಅರಿತವರಿದ್ದಾರೆ,ನಾನು ಅರಿಯಬೇಕು ಎಂಬ ಶ್ರದ್ಧೆ ಉಳ್ಳವರೆಲ್ಲ ಆಸ್ತಿಕರೆ ಆಗುತ್ತಾರೆ.ಇದರಲ್ಲು ಮೂರು ವಿಧಗಳಿವೆ ಸಾಕಾರದಲ್ಲಿ ನಂಬಿಕೆಯಿರುವವರು,ನಿರಾಕಾರದಲ್ಲಿ ನಂಬಿಕೆಯಿರುವವರು ಮತ್ತು ಮೂರನೆಯವರು ಸಾಕಾರ ನಿರಾಕಾರ ಎರಡರಲ್ಲೂ ನಂಬಿಕೆಯಿರುವವರು.
ಇನ್ನು ಈ ಜಗತ್ತಿಗೆ ಕಾರಣವೇ ಇಲ್ಲ ಎನ್ನುವವರು ನಾಸ್ತಿಕರು.
ಹಸಿವಾದಾಗ ಹಸಿವು ನೀಗಲು ಊಟ ಮಾಡಬೇಕು.ನೀವು ಇನ್ನೊಬ್ಬರು ತಯಾರಿಸಿ ಕೊಟ್ಟ ಊಟವನ್ನಾದರು ಮಾಡಿ ಅಥವ ನೀವೇ ತಯಾರಿಸಿಕೊಳ್ಳಿ,ಸಸ್ಯಹಾರವನ್ನಾದರು ಸೇವಿಸಿ ಮಾಂಸಾಹಾರವನ್ನಾದರು ಸೇವಿಸಿ ಅದು ಮುಖ್ಯವಲ್ಲ.ದೇಹಕ್ಕೆ ಬೇಕಾದ ಪೌಷ್ಟಿಕಾಹಾರ ಸೇವಿಸ ಬೇಕಷ್ಟೆ.
ಜಿಜ್ಞಾಸೆ ಎದ್ದಾಗ ಅದನ್ನು ನೀವು ಧರ್ಮಪಥದಿಂದ,ಗುರುಪಥದಿಂದ ಅಥವಾ ಸ್ವ ಪ್ರಯತ್ನದಿಂದ ನೀಗಿಸಿ ಕೊಳ್ಳಿ.ಇಲ್ಲಿ ಪಥ ಮುಖ್ಯವಲ್ಲ,ಸತ್ಯವನ್ನು ನುಂಗುವುದು ಮುಖ್ಯ.
ಪರಂನಲ್ಲಿ ಶ್ರದ್ಧಾಭಕ್ತಿಗಳು ಇರಬೇಕಷ್ಟೆ.
~ ಅನಮ್ತ