ಊರಿನ ಅರ್ಚಕಿಯೊಬ್ಬಳು
ವಿವೇಕ ಮತ್ತು ತಪಸ್ಸಿನ ಬಗ್ಗೆ ಹೇಳು ಎಂದಳು.
ಅವನು ಉತ್ತರಿಸತೊಡಗಿದ.
ನಿಮ್ಮ ಆತ್ಮವೊಂದು ರಣರಂಗ
ಅಲ್ಲಿ ಬಹುತೇಕ
ನಿಮ್ಮ ವಿವೇಕ ಮತ್ತು ನ್ಯಾಯ,
ನಿಮ್ಮ ತಪಸ್ಸು ಮತ್ತು ಬಯಕೆಗಳ ಮೇಲೆ
ಯುದ್ಧ ಸಾರಿರುತ್ತವೆ.
ಈ ಅಂಶಗಳ ನಡುವಿನ
ಅಪಸ್ವರ ಮತ್ತು ವೈರತ್ವಗಳನ್ನು ತೊಡೆದುಹಾಕಿ
ಏಕತೆ ಮತ್ತು ಸೌಹಾರ್ದ ಮೂಡಿಸಲು
ನಾನು ನಿಮ್ಮ ಆತ್ಮದೊಳಗೆ
ಶಾಂತಿ ದೂತನ ಕೆಲಸ ಮಾಡಬೇಕು.
ಈ ಅಂಶಗಳನ್ನು, ನೀವೇ ಪ್ರೀತಿಸದಿದ್ದರೆ
ಸೌಹಾರ್ದ ಮೂಡಿಸುವ ಕೆಲಸದಲ್ಲಿ
ನೀವೇ ಕೈಜೋಡಿಸದಿದ್ದರೆ
ನಾನು ತಾನೇ ಏನು ಮಾಡಲು ಸಾಧ್ಯ?
ವಿವೇಕ ಮತ್ತು ತಪಸ್ಸುಗಳೇ
ನಿಮ್ಮ ಆತ್ಮವನ್ನು ಮುನ್ನಡೆಸುತ್ತಿರುವ ಹಡಗಿನ
ಚುಕ್ಕಾಣಿ ಮತ್ತು ಹಾಯಿ ಪಟಗಳು.
ಅಕಸ್ಮಾತ್,
ನಿಮ್ಮ ಚುಕ್ಕಾಣಿ ಮತ್ತು ಹಾಯಿಪಟ ಹಾನಿಗೊಳಗಾದರೆ
ನಿಮ್ಮ ನೌಕೆ ಹೊಯ್ದಾಡುವುದು, ದಿಕ್ಕು ತಪ್ಪುವುದು
ಅಥವಾ ನಿಂತಲ್ಲೇ ನಿಂತುಬಿಡುವುದು.
ವಿವೇಕದ ಕೈಯಲ್ಲಿ ಆಡಳಿತ ಕೊಡವುದೆಂದರೆ
ನಮ್ಮನ್ನು ನಾವೇ ಇಕ್ಕಟ್ಟಿಗೆ ನೂಕಿಕೊಂಡಂತೆ,
ಆಗ ನಿರ್ಲಕ್ಷ್ಯಕ್ಕೊಳಗಾಗುವ ತಪಸ್ಸು
ತನ್ನನ್ನು ತಾನೇ ಸುಟ್ಟುಕೊಳ್ಳುವ ಜ್ವಾಲೆಯಾಗುತ್ತದೆ.
ಅಂತಯೇ ಆತ್ಮ, ನಿಮ್ಮ ವಿವೇಕವನ್ನು
ತಪಸ್ಸಿನ ಎತ್ತರಕ್ಕೆ ಏರಿಸಲಿ,
ಅದರ ದನಿಯೂ ಕೇಳಿಸುವಂತಾಗಲಿ.
ಹಾಗೆಯೇ ನಿಮ್ಮ ಆತ್ಮ
ತಪಸ್ಸನ್ನು ವಿವೇಕದಿಂದ ಮುನ್ನಡೆಸಲಿ.
ಆಗ ತಪಸ್ಸು
ತನ್ನ ಚಿತಾಭಸ್ಮದಿಂದ ಮೇಲೇಳುವ ಫಿನಿಕ್ಸ್ ಹಕ್ಕಿಯಂತೆ
ಪ್ರತಿದಿನ ಹೊಸ ಹುಟ್ಟು ಪಡೆಯಲಿ.
ಇನ್ನು, ನ್ಯಾಯ ಮತ್ತು ಬಯಕೆ,
ಈ ಎರಡನ್ನೂ ಮನೆಯ ಇಬ್ಬರು ಗೌರವಾನ್ವಿತ ಅತಿಥಿಗಳಂತೆ ಕಾಣಿರಿ.
ಖಂಡಿತವಾಗಿ ನೀವು
ಒಬ್ಬ ಅತಿಥಿಯನ್ನು ಇನ್ನೊಬ್ಬನಿಗಿಂತ
ಹೆಚ್ಚು ಗೌರವಿಸಲು ಬಯಸಲಾರಿರಿ,
ಹಾಗೇನಾದರೂ ಆದಲ್ಲಿ
ಇಬ್ಬರ ಪ್ರೀತಿ, ನಂಬಿಕೆಯನ್ನೂ
ನೀವು ಕಳೆದುಕೊಳ್ಳಬೇಕಾಗುವುದು.
ಬೆಟ್ಟದ ಮೇಲೆ, ಚಿನಾರ್ ಮರದ ನೆರಳಲ್ಲಿ
ಕುಳಿತು
ಕಣ್ಮುಂದೆ ಕಾಣುತ್ತಿರುವ ಹೊಲ, ಹುಲ್ಲುಗಾವಲುಗಳ
ಪ್ರಶಾಂತತೆಯನ್ನೂ, ಸಮಾಧಾನವನ್ನೂ ಅನುಭವಿಸುತ್ತಿರುವಾಗ
ನಿಮ್ಮ ಹೃದಯ, ಮನಸ್ಸಿನಲ್ಲೆ ಅಂದುಕೊಳ್ಳಲಿ
“ ಭಗವಂತ ವಿವೇಕದಲ್ಲಿ ನೆಲೆಸಿದ್ದಾನೆ “
ಭಯಂಕರ ಬಿರುಗಾಳಿ
ಇಡೀ ಅರಣ್ಯವನ್ನೆ ಅಲ್ಲಾಡಿಸುತ್ತಿರುವಾಗ,
ಮಿಂಚು, ಗುಡುಗು
ಆಕಾಶದ ಸಾರ್ವಭೌಮತ್ವವನ್ನು ಸಾರುತ್ತಿರುವಾಗ,
ನಿಮ್ಮ ಹೃದಯ, ಬೆರಗಿನಲ್ಲಿ ಹೇಳಲಿ
“ ಭಗವಂತ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ”
ನೀವು, ಭಗವಂತನ ವಿಶಾಲ ಸಾಮ್ರಾಜ್ಯದಲ್ಲಿ
ಒಂದು ಉಸಿರಾಗಿರುವುದರಿಂದ,
ಅವನ ಮಹಾ ಅರಣ್ಯದಲ್ಲಿ
ಒಂದು ಎಲೆಯಾಗಿರುವುದರಿಂದ,
ನೀವೂ ಸಹ, ವಿವೇಕದಲ್ಲಿ ನೆಲೆಸಿರಿ ಮತ್ತು
ತಪಸ್ಸಿನಲ್ಲಿ ಒಂದಾಗಿರಿ.
ಮುಂದುವರೆಯುತ್ತದೆ……….
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.wordpress.com/2018/10/06/pravadi-9/
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

[…] ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/10/07/pravadi-10/ […]
LikeLike