ಚಿನ್ನಸ್ವಾಮಿ ವಡ್ಡಗೆರೆ ಅವರ “ವಿಪಶ್ಯನ” ಅನುಭವ – 2

chiswaಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ ಭೋದೆಯಾಗಿದೆ  ~ ಚಿನ್ನಸ್ವಾಮಿ ವಡ್ಡಗೆರೆ

ಭಾಗ 1 ಓದಲು ಇಲ್ಲಿ ನೋಡಿ : https://aralimara.com/2019/01/09/vipassana-2/

ವಿಪಶ್ಯನ ಧ್ಯಾನ ಪ್ರಧಾನವಾಗಿ ಉಸಿರನ್ನು ಗಮನಿಸುವಿಕೆಯಿಂದ ಆರಂಭವಾದರೂ ಅದರ ಮುಖ್ಯ ಗುರಿ ಮನಸ್ಸಿನ ಹತೋಟಿ.ಮನಸ್ಸನ್ನು ಸೂಕ್ಷ್ಮವಾಗಿಸಿ ಏಕಾಗ್ರತೆಯನ್ನು ತಂದುಕೊಳ್ಳುವುದು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸಾಧಕನ ಉದ್ದೇಶವಾಗಿರುತ್ತದೆ.

ಮನಸ್ಸನ್ನು ಅರಿತಮಾಡಿದ ನಂತರ ಆಂತರ್ಯದಲ್ಲಿ ನಡೆಯುವ ಸಂವೇದನೆಗಳನ್ನು ಗಮನಿಸುವುದು, ಪ್ರತಿ ಕ್ಷಣ ಬದಲಾಗುವ ಉದಿಸಿ ವ್ಯಯವಾಗುವ ಸಂವೇದನೆಗಳನ್ನು ಒಳಗಣ್ಣಿನಿಂದ ಗಮನಿಸುತ್ತಾ ಸಾಧಕ ದಿನವೀಡಿ ಕುಳಿತುಕೊಳ್ಳಬೇಕಾಗುತ್ತದೆ.
ಜಗತ್ತಿನಲ್ಲಿ ಪ್ರತಿಕ್ಷಣ ಎಲ್ಲವೂ ಬದಲಾಗುತ್ತಲೇ ಇರುತ್ತದೆ.ಬೀಜವೊಂದು ಮರವಾಗಿ,ಕಾಯಾಗಿ,ಹಣ್ಣಾಗಿ ಮತ್ತೆ ಬೀಜವಾಗಿ ತನ್ನ ನಿರಂತರ ಚಲನೆಯನ್ನು ಕಾಪಿಟ್ಟುಕೊಂಡಿರುತ್ತದೆ. “ಉತ್ಪನ್ನವೂ ಕೊನೆಯಾಯಿತು : ಅದರಲ್ಲಿ ಈಗ ಯಾವ ಪರಿವರ್ತನೆಯೂ ಇಲ್ಲ” ಎಂಬ ವಿಚಾರವೇ ಇಲ್ಲ.ಇದನ್ನೇ ಆಧ್ಯಾತ್ಮದಲ್ಲಿ ಭವ ಸಾಗರ ಎಂದು ಕರೆಯುತ್ತಾರೆ. ಮನಸ್ಸಿನ ಸಂಕಾರಗಳಿಂದ ರಾಗ ದ್ವೇಷ ಬೆಳಸಿಕೊಂಡ ಮನುಷ್ಯ ಅದರಿಂದ ಮುಕ್ತನಾಗದೆ ಮತ್ತೆ ಮತ್ತೆ ಜನ್ಮತಾಳುತ್ತಾ ದುಃಖದ ಬಲೆಯಲ್ಲಿ ಸಿಲುಕಿಕೊಳ್ಳುತ್ತಾ `ಭವ’ ದಲ್ಲಿ ಮುಳುಗುತ್ತಾನೆ.ಅದರಿಂದ ಬಿಡುಗಡೆ ಇಲ್ಲದೆ ಅವನಿಗೆ ಮುಕ್ತಿ ಇಲ್ಲ.

ರಾಗ ದ್ವೇಷಗಳಿಂದ ದುಃಖದಿಂದ ಬಿಡುಗಡೆಯಾಗುವ ಮುಕ್ತಿಹೊಂದುವ ಹಾದಿಯನ್ನು ಎರಡೂವರೆ ಸಾವಿರ ವರ್ಷಗಳ ಹಿಂದೆ ತಥಾಗತ ಬುದ್ಧ ಮಹಾಗುರು ಜನಸಾಮಾನ್ಯನಿಗೂ ಅರ್ಥವಾಗುವಂತೆ ಭೋದಿಸಿದ.ಅದರಲ್ಲಿ ವಿಪಶ್ಯನ ಧ್ಯಾನ ಮುಖ್ಯವಾದದ್ದು. ಹಾಗಾದರೆ “ಮನಸ್ಸು” ಎಂದರೆ ಏನು? ಎನ್ನುವ ಪ್ರಶ್ನೆ ಸಹಜವಾಗಿ ಬರುತ್ತದೆ.
ಹೌದು `ಮನಸ್ಸು’ ಎಂದರೆ ಏನು?. ಅದರ ಗುಣಲಕ್ಷಣಗಳು ಏನು ? ಎಂದು ನೋಡುವುದಾದರೆ.ನಿತ್ಯ ಜೀವನದಲ್ಲಿ ಒಂದಲ್ಲ ಒಂದು ಸಲ ಮನಸ್ಸು ಎಂಬ ಶಬ್ಧವನ್ನು ನಾವು ಬಳಸುತ್ತಲೇ ಇರುತ್ತೇವೆ. “ನನ್ನ ಮನಸ್ಸು ಇಂದು ಯಾಕೋ ಸರಿ ಇಲ್ಲ” ” ಮನಸ್ಸಿಗೆ ತುಂಬಾ ನೋವಾಯಿತು” ” ಅಲ್ಲಿಗೆ ಬರಲು ನನಗೆ ಮನಸ್ಸಿಲ್ಲ” ಹೀಗೆ.ಅಂದರೆ ನಮ್ಮ ಪ್ರತಿಯೊಂದು ನಿ ಕೆಲಸಗಳ ಹಿಂದೆ ಈ `ಮನಸ್ಸು’ ಎಂಬ ಮಾಯೆಯ ಪ್ರಭಾವ ಛಾಯೆ ಇದ್ದೆ ಇದೆ ಎಂದಂತಾಯಿತು.

ಮಿದುಳಿನಿಂದ ಆರಂಭವಾಗಿ ಕಾಲಿನ ಬೆರಳ ತುದಿಯವರೆಗೆ ಯಾವುದಾದರೂ ಒಂದು ಭಾಗದಲ್ಲಿ ಇರುವ ಕಣ್ಣಿಗೆ ಕಾಣದ,ಸ್ಪರ್ಶಿಸಲು ಆಗದ ವಸ್ತು ಮನಸ್ಸು ಎಂದು ಕೆಲವರು ವ್ಯಾಖ್ಯಾನ ಮಾಡಿದರೆ ತಲೆಯ ಮಿದುಳಿನ ಯಾವುದಾದರೂ ಒಂದು ಭಾಗದಲ್ಲಿ ಇರುವ ವಸ್ತು, ಹೃದಯದ ಸಮೀಪ ಇರುವ ವಸ್ತು ಎಂದು ಕೆಲವರು ವ್ಯಾಖ್ಯಾನಿಸುತ್ತಾರೆ.ಬುದ್ಧನ ಕಾಲದಿಂದ ಇಂದಿನವರೆಗೂ ಮನಸ್ಸಿನ ಮೇಲೆ ನಾನಾ ಸಂಶೋಧನೆಗಳು ನಡೆಯುತ್ತಲೇ ಇವೆ.
ಪಾಶ್ಚಾತ್ಯ ದೇಶಗಳಲ್ಲಿಯೂ ಮನಸ್ಸಿನ ಜಿಜ್ಞಾಸೆ ಇದೆ.ಅದನ್ನು ಸೈಕಾಲಜಿ ಎಂದು ಕರೆದರೆ ಸುಪ್ತ ಮನಸ್ಸಿನ ಬಗ್ಗೆ ಮನಶಾಸ್ತ್ರಜ್ಙ ಸಿಗ್ಮಂಡ್ ಪ್ರಾಯ್ಡ್ ಮಂಡಿಸಿದ ಸಿದ್ಧಾಂತ ನಮಗೆಲ್ಲರಿಗೂ ಗೊತ್ತಿದೆ.ಭಾರತೀಯ ದರ್ಶನಶಾಸ್ತ್ರದಲ್ಲೂ(ಫಿಲಾಸಫಿ) ಮನಸ್ಸಿನ ಬಗ್ಗೆ ವಿವರಿಸಲಾಗಿದೆ.

ಮಿದುಳು ಎಂಬ ಅವಯವದ ಇಲ್ಲ ಕ್ರಿಯೆಗಳನ್ನು ಮನಸ್ಸು ಎಂಬ ಒಂದೇ ಶಬ್ದದಡಿಯಲ್ಲಿ ವಿಜ್ಞಾನಿಗಳು ಕರೆಯುತ್ತಾರೆ. 2500 ವರ್ಷಗಳ ಹಿಂದೆಯೆ ಬುದ್ಧ ಇಂತಹ ಸಂಕೀರ್ಣವಾದ “ಮನಸ್ಸಿ”ನ ಕಾರ್ಯವಿಧಾನಗಳ ಬಗ್ಗೆ ಇಂಚಿಂಚು ಬಿಡದೆ ವೈಜ್ಞಾನಿಕವಾಗಿ ವ್ಯಾಖ್ಯಾನಮಾಡಿದ್ದ ಎನ್ನುವುದನ್ನು ಕಲ್ಪಿಸಿಕೊಂಡರೆ ಅಚ್ಚರಿಯಾಗುತ್ತದೆ. ಅಲ್ಲಮ,ಅಕ್ಕ,ಬಸವಣ್ಣ ಸೇರಿದಂತೆ ನಮ್ಮ ಬಹುತೇಕ ವಚನಕಾರರು ಮನಸ್ಸಿನ ನಿಯಂತ್ರಣದ ಬಗ್ಗೆ ತಮ್ಮ ವಚನಗಳಲ್ಲಿ ಜಿಜ್ಞಾಸೆ ನಡೆಸಿರುವುದನ್ನು ನೋಡಬಹುದು.
ಚಿತ್ತ, ಮನಸ್ಸು ಎಂದು ಕರೆಯಲಾಗುವ ಚೇತನ ನಾಲ್ಕು ಭಾಗಗಳಲ್ಲಿ ಕೆಲಸಮಾಡುತ್ತದೆ.ಬುದ್ಧನ ಕಾಲದಲ್ಲಿ ಚಿತ್ತದ ಮೊದಲನೆಯ ಭಾಗವನ್ನು ವಿನ್ಯಾಣ, ಎರಡನೆಯದನ್ನು ಸಂನ್ಯಾ,ಮೂರನೆಯದನ್ನು ವೇದನಾ ಹಾಗೂ ನಾಲ್ಕನೆಯದನ್ನು ಸಂಸ್ಕಾರ ಎಂದು ಕರೆಯಲಾಗುತ್ತಿತ್ತು.

ವಿನ್ಯಾಣ ಎಂದರೆ ಕೇವಲ ಅರಿಯುವುದು. ಕಾನ್ಶಿಯಸ್ನೆಸ್.ಪಂಚೇಂದ್ರೀಯಗಳ ತಮಗೆ ತಾವೇ ನಿರ್ಜೀವವಾದವು.ವಿನ್ಯಾಣ ಜೊತೆಯಾಗದೆ ಅವು ಕೆಲಸಮಾಡಲಾರವು. ವಿನ್ಯಾಣ ಜೊತೆಯಾದರೆ ರೂಪ,ರಸ,ಗಂಧ,ಸ್ಪರ್ಶ,ಶಬ್ದ ಅರಿವಿಗೆ ಬರುತ್ತದೆ.ಅದು ಗೊತ್ತಾಗುತ್ತಿದ್ದಂತೆ ಸಂನ್ಯಾ ಕೆಲಸಮಾಡುತ್ತದೆ.ಇದುವರೆಗೆ ತಾನು ನೋಡಿದ,ಜ್ಞಾಪಕಶಕ್ತಿ ಆಧಾರದ ಮೇಲೆ ಗುರುತು ಹಿಡಿಯುತ್ತದೆ. ಇದರ ಆಧಾರದ ಮೇಲೆ ಗುರುತುಹಿಡಿದ ಅನುಭವದ ಮೌಲ್ಯಮಾಪನ ನಡೆಯುತ್ತದೆ.ಅನುಭವ ಹಿತವಾಗಿರುವುದೊ,ದುಃಖದಾಯಕವಾಗಿರುವುದೊ ಎನ್ನುವುದು ತಿಳಿಯುವುದು ಮೂರನೇ ಭಾಗ ಅದನ್ನೇ ವೇದನಾ ಎಂದು ಕರೆಯಲಾಯಿತು.ನಂತರ ಬರುವ ನಾಲ್ಕನೆಭಾಗ ಸಂಸ್ಕಾರ ಪ್ರತಿಕ್ರಿಯೆ ನೀಡುತ್ತದೆ.

ಚಿತ್ತದ ಮೊದಲನೆಯ ಭಾಗ `ವಿನ್ಯಾಣ’ ಅರಿಯುವ ಕೆಲಸಮಾಡುತ್ತದೆ.ಅದು ಕರ್ಮದ ಬೀಜವನ್ನು ಉಂಟುಮಾಡುವುದಿಲ್ಲ.ಎರಡನೆಯ ಭಾಗ `ಸಂನ್ಯಾ’ ಗುರುತು ಹಿಡಿಯುತ್ತದೆ. ಅದೂ ಕೂಡ ಬೀಜ ಉಂಟುಮಾಡುವುದಿಲ್ಲ.ಮೂರನೇಯ ಭಾಗ `ವೇದನೆ’ ಕೂಡ ಬೀಜ ಉಂಟುಮಾಡುವುದಿಲ್ಲ.ನಾಲ್ಕನೇಯ ಭಾಗವಾದ `ಸಂಸ್ಕಾರ’ ಪ್ರತಿಕ್ರಿಯೆಯನ್ನು ಉಂಟುಮಾಡಿ ಮುಂದಿನ ಭವಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಂಸ್ಕಾರ ತೋರುವ ಪ್ರತಿಕ್ರಿಯೆಯ ಭಾಗವಾಗಿ ಶರೀರರದಲ್ಲಿ ಸಂವೇದನೆಗಳು ಉಂಟಾಗುತ್ತವೆ.ದುಃಖದಾದರೆ ದುಃಖದ್ದು, ಸಂತೋಷದ್ದಾದರೆ ಸಂತೋಷದ ಬೀಜ ಆಳದಲ್ಲಿ ಮೊಳಕೆಯೊಡೆದು ಫಲ ಕೊಡುತ್ತದೆ. ಆದ್ದರಿಂದ ಮನಸ್ಸಿನ ನಿಯಂತ್ರಣಕ್ಕೆ ಮನಸ್ಸಿನ ಸಂಖಾರಗಳನ್ನು, ದುಃಖವನ್ನು ಕಳೆದುಕೊಳ್ಳಲು ಬುದ್ಧ ತೋರಿದ ಮಾರ್ಗವೇ ವಿಪಶ್ಯನ ಧ್ಯಾನ.

ಒಂದು ಗಂಟೆ ದೇಹವನ್ನು ಅಲುಗಾಡಿಸಿದೆ ಒಂದೆಡೆ ಕುಳಿತು ಧ್ಯಾನಮಾಡುತ್ತಾ ಸಂವೇದನೆಗಳನ್ನು ರಾಗ ದ್ವೇಷಗಳಿಂದ ನೋಡದೆ ಸಮಚಿತ್ತದಿಂದ ಗಮನಿಸುತ್ತಾ ಪ್ರಜ್ಞೆಯನ್ನು ಬಲಪಡಿಸಿಕೊಳ್ಳುತ್ತಾ ಹೋಗಬೇಕು. ಯಾವಾಗ ಪ್ರಜ್ಞೆಯಲ್ಲಿ ಸಾಧಕ ಸ್ಥಿತನಾಗುತ್ತನೊ ಆಗ ಅನಾಸಕ್ತಿ ಬೆಳೆಯುತ್ತದೆ ಮತ್ತು ಜೀವನಮುಕ್ತನಾಗಿಯೇ ತೀರುತ್ತಾನೆ. ಭೋಗಿಸುತ್ತಾ ಭೋಗಿಸುತ್ತಾ ಬಂಧನದಲ್ಲಿ ಸಿಲುಕುತ್ತೇವೆ. ಗಮನಿಸುತ್ತಾ ಗಮನಿಸುತ್ತಾ ಬಿಡುಗಡೆ ಹೊಂದುತ್ತೇವೆ. ಇದೇ ಬುದ್ಧ ಭೋದೆಯಾಗಿದೆ.

1 Comment

Leave a Reply