“ಸಧ್ಯದಲ್ಲಿ ಏನೂ ಸಂಭವಿಸಲಾರದು, ಸಧ್ಯ ಅಪ್ಪಟ ಖಾಲಿ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 5.1

ಜನ, ಮನೆ ಮಾರು ತ್ಯಜಿಸಿ ಆಶ್ರಮಗಳಿಗೆ ಹೋದರು, ಹಿಮಾಲಯಕ್ಕೆ ಹೋದರು. ಆದರೆ ಅವರು ಹಾಗೆ ಹೋಗಿ ಸಾಧಿಸಿದ್ದಾದರೂ ಏನು? ಅಲ್ಲೂ ಒಂದು ಜಗತ್ತು ಕಟ್ಚಿಕೊಂಡರು, ಚಿಕ್ಕದಾದರೂ ಥೇಟ್ ಇಲ್ಲಿಯದೇ ಥರ! ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 5 ಭಾಗ 1 : Unity of Emptiness

ಈ ಜಗತ್ತು
ಸೃಷ್ಟಿಯಾಗಿರೋದೇ ನಿನ್ನಿಂದ
ನೀನೇ ಜಗತ್ತಿನ ಸೃಷ್ಟಿಕರ್ತ.
ಪ್ರತಿಯೊಬ್ಬರೂ ತಮ್ಮ ಸುತ್ತ
ತಮ್ಮ ತಮ್ಮ ಜಗತ್ತು ಕಟ್ಟಿಕೊಳ್ಳುತ್ತಾರೆ.
ಮನಸ್ಸು ಮತ್ತು ಬುದ್ಧಿಯೇ
ಈ ಜಗತ್ತುಗಳ ಪ್ರಧಾನ ಶಿಲ್ಪಿಗಳು.

ಬುದ್ಧಿಗೆ ಭ್ರಮೆಯ ತವಕ ಹೆಚ್ಚಾದರೂ
ಕ್ರಿಯಾಶೀಲತೆಯಲ್ಲಿ ಮಾತ್ರ ಅಸಾಮಾನ್ಯ.
ನೀವು ಕಟ್ಟುತ್ತಿರುವ ಜಗತ್ತು
ಸ್ವರ್ಗವೋ ನರಕವೋ ಎನ್ನುವುದು
ನಿಮ್ಮ ಮನಸ್ಸಿಗೆ ಬಿಟ್ಟ ವಿಷಯ.

ಹೇಗೆ ಬುದ್ಧಿ ಜಗತ್ತನ್ನು ನಿರ್ಮಿಸುತ್ತದೆಯೋ
ಹಾಗೆಯೇ ಜಗತ್ತು ಕೂಡ
ಬುದ್ಧಿಯನ್ನು ಗಟ್ಟಿ ಮಾಡುತ್ತ ಹೋಗುತ್ತದೆ.
ಇದೊಂದು ವಿಷ ವೃತ್ತ.
ಆದರೆ ಮೂಲ ಮಾತ್ರ ಬುದ್ಧಿಯೇ,
ಜಗತ್ತು ಕೇವಲ ಒಂದು ಉಪ ಉತ್ಪನ್ನ.
ಬುದ್ಧಿ ಅಪಾರ, ಜಗತ್ತು ಬುದ್ಧಿಯ ನೆರಳು.
ನೆರಳನ್ನು ನಾಶ ಮಾಡುವುದು ಸಾಧ್ಯವಿಲ್ಲ
ಎನ್ನುವುದು ಗೊತ್ತಿದ್ದರೂ
ಎಲ್ಲ ಈ ಪ್ರಯತ್ನದಲ್ಲಿ ಮಗ್ನರಾಗಿದ್ದಾರೆ.

ಇರುವ ಗಂಡ/ಹೆಂಡತಿಯ ಜೊತೆ
ಹೊಂದಾಣಿಕೆ ಸಾಧ್ಯವಾಗದಿದ್ದರೆ
ಇನ್ನೊಬ್ಬ/ಳು ಆ ಜಾಗ ತುಂಬಬಹುದೆಂದು
ಯೋಚಿಸುತ್ತೀರಿ ಆದರೆ
ನೀವು ಮಾತ್ರ ಬದಲಾಗುತ್ತಿಲ್ಲ.
ನೀವು ಆ ಇನ್ನೊಬ್ಬರನ್ನು ಕೂಡ
ಮೊದಲನೇಯವರಂತೆ ಬದಲಾಯಿಸುತ್ತೀರಿ.
ಏಕೆಂದರೆ ನಿಮ್ಮ ಗಂಡ/ ಹೆಂಡತಿಯನ್ನು ಸೃಷ್ಚಿಸುತ್ತಿರುವುದು
ಬೇರೆ ಯಾವುದೂ ಅಲ್ಲ, ನಿಮ್ಮ ಅದೇ ಬುದ್ಧಿ.
ಸಮಸ್ಯೆ ಇರೋದು ಗಂಡ/ಹೆಂಡತಿ ಯಲ್ಲಲ್ಲ
ನಿಮ್ಮ ಬುದ್ಧಿ-ಮನಸ್ಸಿನಲ್ಲಿ.

ಹಾಗೆಯೇ ಜಗತ್ತಿನ ಎಲ್ಲ ಕ್ರಿಯೆಗಳು.

ನೀವು ಅರಮನೆಯಲ್ಲಿ ಸುಖದಿಂದ ಇರಬಲ್ಲಿರ?
ನೀವು ಗುಡಿಸಲಲ್ಲಿ ಸುಖವಾಗಿಲ್ಲವಾದರೆ
ಅರಮನೆ ಕೂಡ ನಿಮಗೆ
ಆ ಸುಖವನ್ನು ಸಾಧ್ಯಮಾಡುವುದಿಲ್ಲ.

ಅರಮನೆ/ಗುಡಿಸಲು ಎಲ್ಲ
ನಿಮ್ಮೊಳಗೆ ಇರುವಂಥವು.
ನಿಮ್ಮನ್ನು ಬಲವಂತದಿಂದ ಸ್ವರ್ಗದ ಒಳಗೆ ನೂಕಿದರೂ
ಅಲ್ಲಿ ನೀವು ನಿಮಗೆ ಬೇಕಾದ ನರಕವನ್ನೇ ಕಟ್ಟಿಕೊಳ್ಳುತ್ತೀರಿ
ನಿಮ್ಮ ಬುದ್ಧಿಯನ್ನು ಬದಲಾಯಿಸಿಕೊಳ್ಳದಿದ್ದರೆ.

ನೀವು, ಜಗತ್ತನ್ನು ಬದಲಾಯಿಸುವುದೇ
ಸುಲಭ ವಿಧಾನ ಎಂದುಕೊಂಡಿದ್ದೀರಿ
ಮತ್ತು ಎಷ್ಟೋ ಶತಮಾನಗಳಿಂದ ಹಾಗೇ
ಪ್ರಯತ್ನ ಮಾಡುತ್ತಿದ್ದೀರಿ ಕೂಡ.
ಮನೆ, ಕೆಲಸ, ಗಂಡ/ಹೆಂಡತಿ, ಗೆಳೆಯರು
ಏನೆಲ್ಲ ಬದಲಾಯಿಸಲು ಪ್ರಯತ್ನಿಸಿಲ್ಲ ನೀವು?
ನೀವು ಮಾತ್ರ ಕೊಂಚವೂ ಬದಲಾಗಿಲ್ಲ
ಹಾಗಾದರೆ ನಿಮ್ಮ ಜಗತ್ತು ಹೇಗೆ ಬದಲಾದೀತು?

ಇದೇ ಕಾರಣಕ್ಕೆ ಹುಟ್ಟಿದ್ದು
ಸರ್ವಸಂಗ ಪರಿತ್ಯಾಗ ಎನ್ನುವ ಮಿಥ್ಯಾಚರಣೆ.
ಜನ, ಮನೆ ಮಾರು ತ್ಯಜಿಸಿ
ಆಶ್ರಮಗಳಿಗೆ ಹೋದರು, ಹಿಮಾಲಯಕ್ಕೆ ಹೋದರು
ಆದರೆ ಅವರು ಹಾಗೆ ಹೋಗಿ
ಸಾಧಿಸಿದ್ದಾದರೂ ಏನು?
ಅಲ್ಲೂ ಒಂದು ಜಗತ್ತು ಕಟ್ಚಿಕೊಂಡರು
ಚಿಕ್ಕದಾದರೂ ಥೇಟ್ ಇಲ್ಲಿಯದೇ ಥರ.

ಉಳಿಗಿರುವುದು ಒಂದೇ ದಾರಿ
ಮನಸ್ಸು ಮತ್ತು ಬುದ್ಧಿಯನ್ನು ಬದಲಾವಣೆಗೆ ಒಡ್ಡುವುದು.
ಆಗ ನಿಮ್ಮ ಜಗತ್ತು ಬದಲಾಗುವುದು,
ನೀವು ಹೋದಲ್ಲೆಲ್ಲ ನಿಮ್ಮನ್ನು
ಹೊಸ ಜಗತ್ತು ಸ್ವಾಗತಿಸುವುದು.

ಇನ್ನೂ ಸೂಕ್ಷ್ಮವಾಗಿ
ವಿಷಯದ ಆಳಕ್ಕೆ ಇಳಿದರೆ,

ಈ ಬದಲಾದ ಜಗತ್ತು ಕೂಡ
ಬಹು ಕಾಲ ನಿಮ್ಮನ್ನು ಹಿಡಿದಿಟ್ಟುಕೊಳ್ಳಲಾರದು.
ಜಗತ್ತು ಎಷ್ಟೇ ಸುಂದರವಾದರೂ
ಮನುಷ್ಯ ಬಹುಬೇಗ ಅದರ
ಆಕರ್ಷಣೆ ಕಳೆದುಕೊಳ್ಳುತ್ತಾನೆ,
ಮತ್ತೆ ಹೊಸ ಬದಲಾವಣೆಗೆ ಹಾತೊರೆಯುತ್ತಾನೆ ಹಾಗು
ಇದೇ ಕಾರಣಕ್ಕೆ ಮತ್ತೆ ಸಂಕಟಕ್ಕೊಳಗಾಗುತ್ತಾನೆ.

ಮನಸ್ಸು-ಬುದ್ಧಿಗೆ ಕಾಲವನ್ನು ಕಟ್ಟಿಹಾಕಿ
ಕಾಲಾತೀತವಾಗುವುದು ಸಾಧ್ಯವಿಲ್ಲ.

ಆದ್ದರಿಂದಲೇ ಬುದ್ಧಿ-ಮನಸ್ಸು
‘ಸಧ್ಯ’ ದಲ್ಲಿ ಜೀವಿಸಲಾರವು.
‘ಸಧ್ಯ’ ಕಾಲಾತೀತ.
ಈ ಸಧ್ಯದಲ್ಲಿ ಏನೂ ಸಂಭವಿಸಲಾರದು.
ಸಧ್ಯ ಅಪ್ಪಟ ಖಾಲಿ.

ಇದನ್ನೇ ಬುದ್ಧ ‘ಶೂನ್ಯ’ ಎಂದು ವ್ಯಾಖ್ಯಾನ ಮಾಡಿದ.
ಈ ಶೂನ್ಯದಲ್ಲಿ
ಯಾರ ಬಂದು ಹೋಗುವಿಕೆ ಇಲ್ಲ
ಏನೂ ಸಂಭವಿಸದು ಕೂಡ.

ಆದ್ದರಿಂದಲೇ ಬುದ್ಧಿ-ಮನಸ್ಸಿಗೆ
ಕಾಲದಿಂದ ಬಿಡಿಸಿಕೊಂಡ ಶೂನ್ಯದಲ್ಲಿ
ಯಾವ ಅಸ್ತಿತ್ವವೂ ಇಲ್ಲ.
ಬುದ್ಧಿ- ಮನಸ್ಸಿಗೆ ಜಿಗಿಯುವ ಹುಕಿ
ಒಂದು ನಿರೀಕ್ಷೆಯಿಂದ ಇನ್ನೊಂದು ನಿರೀಕ್ಷೆಗೆ
ಇಡೀ ಸಂದರ್ಭವೇ
ಈ ಕಾರಣಕ್ಕಾಗಿ ಯಾತನಾಮಯ.

ಒಮ್ಮೆ ಹೀಗಾಯಿತು:

ಮುಲ್ಲಾ ನಸ್ರುದ್ದೀನ ನಿಗೆ ನಿರುದ್ಯೋಗ,
ಸ್ವಲ್ಪ ಕೂಡ ಪ್ರತಿಭೆ ಇಲ್ಲದಿದ್ದರೂ
ನಾಟಕಗಳಲ್ಲಿ ಪಾತ್ರ ಮಾಡುವ ಹುಚ್ಚು.

ಮೇಲಿಂದ ಮೇಲೆ
ನಾಟಕಗಳಲ್ಲಿ ಪಾತ್ರ ಕೊಡಿಸುವ
ದಲ್ಲಾಳಿಯ ಮನೆಗೆ ಹೋಗಿ
ಪಾತ್ರ ಕೊಡಿಸುವಂತೆ ಗೋಗರೆಯುತ್ತಿದ್ದ.

ನಸ್ರುದ್ದೀನ್ ನ ಪ್ರತಿಭೆಯ ವಿಷಯ
ಪೂರ್ತಿ ಗೊತ್ತಿದ್ದ ಆ ದಲ್ಲಾಳಿ ಪ್ರತೀಬಾರಿ
“ ನಿನ್ನಿಂದ ನಟನೆ ಸಾಧ್ಯವೇ ಇಲ್ಲ” ಎಂದು
ಖಡಾ ಖಂಡಿತವಾಗಿ ಹೇಳಿ
ನಸ್ರುದ್ದೀನ್ ನನ್ನು ಸಾಗ ಹಾಕುತ್ತಿದ್ದ.

ಆದರೂ ಎದೆಗುಂದದ ನಸ್ರುದ್ದೀನ್
ತನ್ನ ಪ್ರಯತ್ನ ನಿಲ್ಲಿಸಲಿಲ್ಲ,
ಮೇಲಿಂದ ಮೇಲೆ ದಲ್ಲಾಳಿಯ ಮನೆಗೆ ಹೋಗಿ
ವಿನಂತಿ ಮಾಡಿಕೊಳ್ಳುತ್ತಿದ್ದ.

ಆಮೇಲೆ
ಬಹು ದಿನಗಳ ನಂತರ ಒಂದು ದಿನ ಮುಲ್ಲಾ
ಬಹಳ ದುಃಖದ ಮುಖ ಭಾವ ಹೊತ್ತು
ದಲ್ಲಾಳಿಯ ಮನೆಗೆ ಹೋದ.
ನಸ್ರುದ್ದೀನ್ ನ ಚಿಂತಾಕ್ರಾಂತ ಮುಖ ಗಮನಿಸಿದ ದಲ್ಲಾಳಿ
ಪ್ರಶ್ನೆ ಮಾಡಿದ,

“ ಯಾಕೆ ನಸ್ರುದ್ದೀನ ಇಷ್ಟು ಚಿಂತೆ? ಏನು ವಿಷಯ?”

ನಸ್ರುದ್ದೀನ ಉತ್ತರಿಸಿದ,

“ ನಾಲ್ಕು ವಾರಗಳ ಮಟ್ಟಿಗೆ
ಬೇರೆ ಊರಿಗೆ ಹೋಗುತ್ತಿದ್ದೇನೆ,
ನನಗೆ ಯಾವುದಾದರೂ ನಟನೆಗಾಗಿ
ಅವಕಾಶಗಳು ಬಂದರೆ
ದಯವಿಟ್ಟು ಒಪ್ಪಿಕೊಳ್ಳಬೇಡ”

ಮನಸ್ಸು-ಬುದ್ಧಿ
ಕೆಲಸ ಮಾಡುವುದು ಹೀಗೆ.
ಸದಾ ಜಿಗಿಯುತ್ತಿರುತ್ತವೆ.
ಅದೇ ಅದೇ ನಿರೀಕ್ಷೆಯ ಬಾಗಿಲನ್ನು
ಮತ್ತೆ ಮತ್ತೆ ತಟ್ಟುತ್ತಿರುತ್ತವೆ.

(ಮುಂದುವರೆಯುತ್ತದೆ…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/10/15/hsin/

1 Comment

Leave a Reply