ಶ್ರೂಯತಾಂ ಧರ್ಮ ಸರ್ವಸ್ವಂ ಶೃತ್ವಾ ಚ ಅವಧಾರ್ಯತಾಂ | ಆತ್ಮನಃ ಪ್ರತಿಕೂಲಾನಿ ನ ಪರೇಷಾಂ ಸಮಾಚರೇತ್ : ಎಷ್ಟು ಧರ್ಮಗಳನ್ನು ತಿಳಿದಿದ್ದರೆ ತಾನೆ ಏನು, ಅದನ್ನು ಅನುಸರಿಸದೆ ಹೋದರೆ ಯಾವ ಪ್ರಯೋಜನವೂ ಇಲ್ಲ ಅನ್ನುವುದು ಈ ಶ್ಲೋಕದ ಅರ್ಥ.
ನಮ್ಮಲ್ಲಿ ಬಹುತೇಕರು ಶಾಸ್ತ್ರಗಳನ್ನು ಕಂಠಸ್ಥ ಮಾಡಿಕೊಂಡಿರುತ್ತಾರೆ. ಶ್ಲೋಕ ಸಂಖ್ಯೆ, ಪುಟ ಸಂಖ್ಯೆ ಸಹಿತ ಹೇಳುವಷ್ಟು ಪಾಂಡಿತ್ಯ ಹೊಂದಿರುತ್ತಾರೆ. ಅವರಿಗೆ ತಿಳಿವಳಿಕೆ ಇರುತ್ತದೆಯೇ ಹೊರತು ಅನುಸರಣೆಗೆ ಮನಸ್ಸಿರುವುದಿಲ್ಲ. ದುರ್ಯೋಧನ “ಜಾನಾಮಿ ಧರ್ಮಮ್ ನ ಮೇ ಪ್ರವೃತ್ತಿಃ ಜಾನ್ಯಾಮಧರ್ಮಮ್ ನ ಚ ಮೇ ನಿವೃತ್ತಿಃ” ಅನ್ನುತ್ತಾನಲ್ಲ, ಹಾಗೆ. ಧರ್ಮಾಧರ್ಮಗಳು ನನಗೆ ತಿಳಿದಿವೆ, ಅವುಗಳ ಅನುಸರಣೆಯಲ್ಲಾಗಲೀ ನಿರಾಕರಣೆಯಲ್ಲಾಗಲೀ ನನಗೆ ಆಸಕ್ತಿ ಇಲ್ಲ ಅನ್ನೋದು ದುರ್ಯೋಧನನ ನಿಲುವು. ಈ ಧೋರಣೆಯೇ ಮುಂದೆ ದುರ್ಯೋಧನ ಮಾತ್ರವಲ್ಲ, ಸಂಪೂರ್ಣ ಕುರು ಸಹೋದರರ ನಾಶಕ್ಕೆ ಕಾರಣವಾಯಿತು.
ಆದ್ದರಿಂದ, ಅರಿಯುವುದು ಮಾತ್ರವಲ್ಲ, ಅನುಸರಣೆಗೆ ಹೆಚ್ಚಿನ ಮಹತ್ವ ಕೊಡೋಣ. ಇದು ಧರ್ಮಕ್ಕೆ ಮಾತ್ರ ಸೀಮಿತವಲ್ಲ. ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ ಸಂಗತಿಗಳು – ಪ್ರತಿಯೊಂದಕ್ಕೂ ಅನುಸರಿಸುವ ಮಾತು.