ಸೂರ್ಯಕವಚ ಸ್ತೋತ್ರ, ಕನ್ನಡ ಅರ್ಥ ಸಹಿತ

ಯಾಜ್ಞವಲ್ಕ್ಯರು ಬೋಧಿಸಿದ, ದೇಹವನ್ನು ದೃಢವಾಗಿಸುವಂತೆ ಪ್ರಾರ್ಥಿಸುವ ಸೂರ್ಯ ಕವಚ ಸ್ತೋತ್ರ ಇಲ್ಲಿದೆ…


|| ಶ್ರೀ ಗಣೇಶಾಯ ನಮಃ ||
ಯಾಜ್ಞವಲ್ಕ್ಯ ಉವಾಚ:-
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ |
ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||1||
ಭಾವಾರ್ಥ:
ಯಾಜ್ಞವಲ್ಕ್ಯರು ಹೇಳಿದರು; ಎಲೈ ಮುನಿಪುಂಗವನೇ! ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯ ಕವಚವನ್ನು ನಿನಗೆ ಅರುಹುವವನಾಗಿದ್ದೇನೆ. ಕೇಳುವವನಾಗು.

ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ |
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||2||
ಭಾವಾರ್ಥ: ಅತ್ಯಂತ ಪ್ರಕಾಶಿಸುತ್ತಿರುವ ಕಿರೀಟವುಳ್ಳವನೂ, ರಂಜಿಸುತ್ತಿರುವ ಮಕರ ಕರ್ಣ ಕುಂಡಲಗಳನ್ನು ಧರಿಸಿದವನೂ, ಸಾವಿರ ಕಿರಣಗಳೂಳ್ಳವನೂ ಆಗಿರುವ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತುತಿಯನ್ನು ಪಠಿಸಬೇಕು.

ಶಿರೋಮೇ ಭಾಸ್ಕರಃ ಪಾತು ಲಲಾಟಂ ಮೇsಮಿತದ್ಯುತಿಃ |
ನೇತ್ರೇ ದಿನಮಣಿಃ ಪಾತು ಶ್ರವಣೇವಾಸರೇಶ್ವರಃ ||3||
ಭಾವಾರ್ಥ: ಹಣೆಯಲ್ಲಿ ಅಮಿತ ಪ್ರಕಾಶವುಳ್ಳ ಭಾಸ್ಕರನು ನನ್ನ ತಲೆಯನ್ನು ಕಾಪಾಡಲಿ. ದಿನಮಣಿಯು ನಯನಗಳನ್ನೂ, ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.

ಘ್ರಾಣಂ ಫರ್ಮಘೃಣಿಃ ಪಾತು ವದನಂ ವೇದವಾಹನಃ |
ಜಿಹ್ವಾಂ ಮೇ ಮಾನವಃ ಪಾತು ಕಂಠಂ ಮೇ ಸುರವಂದಿತಃ ||4||
ಭಾವಾರ್ಥ: ನಾಸಿಕವನ್ನು ಉಷ್ಣ ಕಿರಣನೂ, ಮುಖವನ್ನು ವೇದವಾಹನನೂ ಕಾಪಾಡಲಿ. ಹಾಗೆಯೇ ನನ್ನ ನಾಲಿಗೆಯನ್ನು ಗೌರವದಾಯಕನೂ, ಕುತ್ತಿಗೆಯನ್ನು ಸುರರಿಂದ ವಂದಿಸಲ್ಪಡುವವನು ಕಾಪಾಡಲಿ.

ಸ್ಕಂಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ |
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ||5||
ಭಾವಾರ್ಥ: ಪ್ರಭಾಕರನು ಹೆಗಲಿನಲ್ಲಿ ನೆಲೆಸಿ ರಕ್ಷಿಸಲಿ, ಜನಪ್ರಿಯನಾದವನು ಎದೆಯನ್ನು ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ, ಸರ್ವಾಂಗಗಳನ್ನು ಸಕಲಾಧಿಪನೂ ಕಾಪಾಡಲಿ.

ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೆ |
ದಧಾತಿ ಯಃ ಕರೇತಸ್ಯ ವಶಗಾಃ ಸರ್ವಸಿದ್ಧಯಃ ||6||
ಭಾವಾರ್ಥ: ಸೂರ್ಯನ ರಕ್ಷಣಾ ಕವಚವನ್ನು ದಯಪಾಲಿಸುವ ಈ ಸ್ತುತಿಯನ್ನು ಭುಜಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಧರಿಸುಕೊಳ್ಳುವವರಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋsಧೀತೇಸ್ವಸ್ಥಮಾನಸಃ |
ಸ ರೋಗಮುಕ್ತೋ ಧೀರ್ಘಾಯು: ಸುಖಂ ಪುಷ್ಟಿಂ ಚ ವಿಂದತಿ ||7||
ಭಾವಾರ್ಥ: ಅಂತರಂಗ ಬಹಿರಂಗಗಳೆರಡನ್ನೂ ಶುದ್ಧಿಗೊಳಿಸಿಕೊಂಡು, ಮಾಡಿ ಶಾಂತ ಮನಸ್ಸಿನಿಂದ ಉತ್ತಮ ರೀತಿಯಲ್ಲಿ ಇದನ್ನು ಜಪಿಸುವವರು ರೋಗ ಮುಕ್ತರಾಗಿ ಆರೋಗ್ಯಶಾಲಿಯಾಗುವರು, ಧೀರ್ಘಾಯುಶಾಲಿಯಾಗುವರು, ಸೌಖ್ಯವನ್ನೂ ದೇಹ ಸಾಮರ್ಥ್ಯವನ್ನೂ ಹೊಂದುವರು.

ವಿಸೂ: ಯಾವುದೇ ಸ್ತೋತ್ರಪಠಣಕ್ಕೆ ಮುನ್ನ ಮಾನಸಿಕ ಶುದ್ಧಿ ಅತ್ಯಗತ್ಯ. ಲೋಭಮೋಹಾದಿ ಅರಿಷಡ್ವರ್ಗಗಳಿಂದ ಮುಕ್ತರಾಗಿ, ಸಕಲ ಲೋಕದ ಒಳಿತನ್ನು ಪ್ರಾರ್ಥಿಸಿ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡಿ, ಸಕಲ ಜೀವರಾಶಿಯಲ್ಲೂ ತಮ್ಮನ್ನೇ ಕಾಣುತ್ತಾ ತಾರತಮ್ಯಮುಕ್ತರಾದವರಿಗೆ ಮಾತ್ರ ಸ್ತೋತ್ರಫಲಗಳು ಲಭಿಸುವವು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a Reply

This site uses Akismet to reduce spam. Learn how your comment data is processed.