ಹಾಗಾಗಿಯೇ, ಹುಡುಕಾಟದ ಹಾದಿಯಲ್ಲಿ, ಜ್ಞಾನದ ಹಾದಿಯಲ್ಲಿ, ಅನುಭಾವದ ಹಾದಿಯಲ್ಲಿ ನೀವು ಮಾಡಬೇಕಾದದ್ದು ಏನೂ ಇಲ್ಲ. ಸುಮ್ಮನೇ ಶರಣಾಗಬೇಕು. ಅಕಸ್ಮಾತ್ ನೀವು ಏನಾದರೂ ಮಾಡಿದಿರಾದರೆ, ನೀವು ಉಳಿದು ಹೋಗುತ್ತೀರಿ, ಆ ಉಳಿದು ಹೋದದ್ದಕ್ಕೆ ಅಹಂ ಅಂಟಿಕೊಳ್ಳುತ್ತದೆ.
ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಸೂಫಿ ಅನುಭಾವಿ ಒಂದು ಹಳ್ಳಿಯನ್ನು ಪ್ರವೇಶ ಮಾಡುವ ದಾರಿಯಲ್ಲಿ ಮೇಣದ ಬತ್ತಿಯನ್ನು ಬೆಳಗುತ್ತಿದ್ದ ಒಬ್ಬ ಮುಗ್ಧ ಹುಡುಗನನ್ನು ಗಮನಿಸಿದ.
ಮೇಣದ ಬತ್ತಿಯ ಬೆಳಕಲ್ಲಿ ಹುಡುಗನ ಮುಖ ಕಾಂತಿಯಿಂದ ಬೆಳಗುತ್ತಿತ್ತು. ಸೂಫಿ ಕುತೂಹಲದಿಂದ ಆ ಹುಡುಗನನ್ನು ಪ್ರಶ್ನೆ ಮಾಡಿದ.
“ ನೀನು ಬೆಳಗಿದ್ದ ಈ ಕ್ಯಾಂಡಲ್ ? “
“ ಹೌದು “ ಹುಡುಗ ಉತ್ತರಿಸಿದ.
“ ಹಾಗಾದರೆ ಕ್ಯಾಂಡಲ್ ನ ಜ್ವಾಲೆ ಎಲ್ಲಿಂದ ಬಂತು, ನೀನು ನೋಡಿರಬೇಕು ಅಲ್ವಾ ? ಹೇಳು ಆ ಜ್ವಾಲೆ ಎಲ್ಲಿಂದ ಬಂತು ? “
ಸೂಫಿ ತಮಾಷೆ ಮಾಡಿದ.
ಹುಡುಗ ನಗುತ್ತ, ಕ್ಯಾಂಡಲ್ ನ ಊದಿ ಆರಿಸಿಬಿಟ್ಟ. ಮತ್ತು ಸೂಫಿಯನ್ನ ಪ್ರಶ್ನೆ ಮಾಡಿದ.
“ ಈ ಜ್ವಾಲೆ ಆರಿ ಹೋಗುವುದನ್ನ ನೀನು ನೋಡಿದೆ ಅಲ್ವ, ಹೇಳು ಆ ಜ್ವಾಲೆ ಎಲ್ಲಿ ಹೋಯಿತು ? “
ಜ್ವಾಲೆ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಯಾರಿಗೂ ಗೊತ್ತಿಲ್ಲ. ಜ್ವಾಲೆ ದಾಖಲಾಗಿದ್ದು ಅನಸ್ತಿತ್ವದಿಂದ ಅಥವಾ ಎಲ್ಲದರ ಮೂಲಕ , ಈ ಎರಡೂ ಒಂದೇ. ಅದು ಹೋದದ್ದು ಅನಸ್ತಿತ್ವದ ಒಳಗೆ ಅಥವಾ ಎಲ್ಲದರ ಒಳಗೆ ಈ ಎರಡೂ ಕೂಡ ಒಂದೇ. ಇದು ನಿರ್ವಾಣ.
ಸೂಫಿಗಳು, ಇದನ್ನೇ ಫನಾ ಎನ್ನುತ್ತಾರೆ ; ಸಂಪೂರ್ಣವಾಗಿ ಕಳೆದು ಹೋಗುವುದು.
ಹಾಗಾಗಿಯೇ, ಹುಡುಕಾಟದ ಹಾದಿಯಲ್ಲಿ, ಜ್ಞಾನದ ಹಾದಿಯಲ್ಲಿ, ಅನುಭಾವದ ಹಾದಿಯಲ್ಲಿ ನೀವು ಮಾಡಬೇಕಾದದ್ದು ಏನೂ ಇಲ್ಲ. ಸುಮ್ಮನೇ ಶರಣಾಗಬೇಕು. ಅಕಸ್ಮಾತ್ ನೀವು ಏನಾದರೂ ಮಾಡಿದಿರಾದರೆ, ನೀವು ಉಳಿದು ಹೋಗುತ್ತೀರಿ, ಆ ಉಳಿದು ಹೋದದ್ದಕ್ಕೆ ಅಹಂ ಅಂಟಿಕೊಳ್ಳುತ್ತದೆ.
ಬದಲಾವಣೆಗೆ ಪ್ರಯತ್ನಿಸಬೇಡಿ, ಸುಧಾರಣೆಗಾಗಿ ತುಡಿಯಬೇಡಿ. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಯಾವ ಪ್ರಯತ್ನಕ್ಕೂ ಕೈ ಹಾಕಬೇಡಿ. ಸುಮ್ಮನೇ ಇದ್ದು ಬಿಡಿ. Just Be.