ಬುದ್ಧ ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಟ್ಟ. ತನ್ನ ಸಂಘಕ್ಕೆ ಶರಣು ಬಂದವರಿಗೆಲ್ಲ ದೀಕ್ಷೆ ನೀಡಿ ಬಿಕ್ಖುಗಳನ್ನಾಗಿ ಮಾಡಿದ. ಸಾಧನೆಯ ಹಾದಿ ತೋರಿದ. ಹೆಣ್ಣು ಮಕ್ಕಳಿಗೂ ಬುದ್ಧ ಕಾರುಣ್ಯದಿಂದ ಈ ಅವಕಾಶ ಒದಗಿಬಂತು. ಬಿಕ್ಖುಣಿಯರ ಸಂಖ್ಯೆ ಹೆಚ್ಚಿತು. ಬಿಕ್ಖುಣೀ ಸಂಘ ಸ್ಥಾಪನೆಯಾಯ್ತು. ಗೃಹಿಣಿಯರು, ಅವಿವಾಹಿತೆಯರು, ವೃದ್ಧೆಯರು, ವಿಧವೆಯರು ಮಾತ್ರವಲ್ಲದೆ ಸಮಾಜದ ಕೊಂಕಿಗೆ ಗುರಿಯಾಗಿದ್ದ ವೇಶ್ಯೆಯರು, ಆಸ್ಥಾನ ನರ್ತಕಿಯರಿಗೂ ಈ ಸಂಘದಲ್ಲಿ ಸಾಧನೆಯ ಅವಕಾಶ ದೊರೆಯಿತು. ಇದನ್ನು ಬೌದ್ಧ ಧರ್ಮದ ಮಹಾಕ್ರಾಂತಿ ಎಂದೇ ಹೇಳಬಹುದು… । ಅಲಾವಿಕಾ
ಥೇರೀಗಾಥಾ- ಥೇರಿಯರ ಹಾಡು. ಹಿರಿಯ ಬೌದ್ಧ ಬಿಕ್ಖುಣಿಯರೇ ಈ ಥೇರಿಯರು. ಅವರು ರಚಿಸಿದ ಅನುಭಾವ ಗೀತೆಗಳ ಸಂಕಲನವನ್ನು ಥೇರೀಗಾಥಾ ಎಂದು ಕರೆಯಲಾಗಿದೆ. ಇದು ಬುದ್ಧ ನಿಕಾಯ’ದ ಒಂಬತ್ತನೇ ಸಂಪುಟದಲ್ಲಿ ಒಳಗೊಂಡಿದೆ. ಹಿರಿಯ ಥೇರಿಯರ ಒಟ್ಟು ಎಪ್ಪತ್ತ ಮೂರು ರಚನೆಗಳು ಇಲ್ಲಿ ಅಡಕವಾಗಿವೆ. ಅರ್ಹಂತ ಪದವನ್ನು ಪಡೆಯುವ ಹಂತದಲ್ಲಿ ಬಿಕ್ಖುಣಿಯರು ಕಂಡುಕೊಂಡಿದ್ದನ್ನು, ತಮ್ಮ ಅನುಭವಗಳನ್ನು ಮಾರ್ಗದರ್ಶಕ ರೀತಿಯಲ್ಲಿ ಗೀತೆಗಳಾಗಿ ದಾಖಲಿಸಿಟ್ಟಿದ್ದಾರೆ. ಥೇರೀಗಾಥಾದ ಈ ಗೀತೆಗಳನ್ನು ಸಾಹಿತ್ಯಕ ದೃಷ್ಟಿಯಿಂದ ನೋಡಲಾಗದು. ಇವು ಅನುಭಾವದ ನೆಲೆಗಟ್ಟಿನಲ್ಲಿ ರೂಪುಗೊಂಡವಾದ್ದರಿಂದ ಯಾವ ಲೌಕಿಕ ಮಾಪನಕ್ಕೂ ನಿಲುಕದಂಥವು. ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಇವನ್ನು
ಗಾಥಾ’ (ಕಥೆ) ಎಂದು ಕರೆದಿರುವುದು. ಥೇರೀಗಾಥಾದ ಈ ಗೀತೆಗಳು ಸರಳವಾಗಿ ತೋರಿದರೂ ಅದ್ಭುತ ಹೊಳಹುಗಳಿಂದ ಕೂಡಿರುವಂಥವು. ಬುದ್ಧನ ಬೋಧಮನಾ ಸಾರವನ್ನೆ ತಮ್ಮ ಮುಗ್ಧ ತಿಳಿವಿನಲ್ಲಿ ಹಿಡಿದಿಟ್ಟುಕೊಂಡAಥವು. ತಮ್ಮ ಕಾಣ್ಕೆಯಲ್ಲೇ ಅಧ್ಯಾತ್ಮ ಲೋಕವನ್ನು ನೋಡಲೊಂದು ಕಿಟಕಿ ತೆರೆದಿಟ್ಟಿದ್ದಾರೆ ಈ ಬಿಕ್ಖುಣಿಯರು.
ಸಾಮಾಜಿಕ ಆಯಾಮ
ಬೌದ್ಧ ಧರ್ಮ ಹೆಣ್ಣು ಮಕ್ಕಳ ಆಧ್ಯಾತ್ಮಿಕ ಬದುಕಿಗೊಂದು ಬುನಾದಿ ಹಾಕಿಕೊಟ್ಟಿತು. ಕಂದಾಚಾರಗಳು, ರೀತಿ ರಿವಾಜುಗಳು ತಪ್ಪು ವ್ಯಾಖ್ಯಾನಗಳಿಗೆ ಒಳಗಾಗಿ ಹೆಣ್ಣುಮಕ್ಕಳನ್ನು ಆಧ್ಯಾತ್ಮಿಕ ಸಾಧನೆಯ ಹಕ್ಕಿನಿಂದ ದೂರ ಇರಿಸಿದ್ದವು. ಈ ಧಾರ್ಮಿಕ – ಆಧ್ಯಾತ್ಮಿಕ ಸ್ವಾತಂತ್ರ್ಯ ಹರಣವು ಹೆಣ್ಣುಮಕ್ಕಳ ಅಂತರಂಗವನ್ನು ಕತ್ತಲಿನಲ್ಲಿ ಇರಿಸಿತ್ತು. ಧರ್ಮವೇ ಆತ್ಮವಾಗಿರುವ ಭಾರತದ ನೆಲದಲ್ಲಿ ಸಾಮಾಜಿಕ ತಾರತಮ್ಯಕ್ಕೂ ಇದು ನಾಂದಿಯಾಯ್ತು. ಈ ಹಕ್ಕುಗಳ ನಿರಾಕರಣೆಯೇ ಸ್ತ್ರೀ ಶೋಷಣೆ, ಭ್ರೂಣ ಹತ್ಯೆಯಂತಹ ಪಾಪಗಳಿಗೂ ಪ್ರೇರಣೆಯಾಯ್ತು.
ಇವೇ ಅಂಶಗಳು ದಲಿತರ ಸಂದರ್ಭಕ್ಕೂ ಅನ್ವಯಿಸುತ್ತವೆ. ಆ ಒಂದು ಕಾಲಘಟ್ಟದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಆಚರಣೆಯ ಹಕ್ಕುಗಳು ನಿರಾಕರಿಸಲ್ಪಟ್ಟ ಸಮುದಾಯಗಳಿಗೆ ಬೌದ್ಧ ಧರ್ಮ ಆಶಾಕಿರಣವಾಗಿ ಹೊಮ್ಮಿ ಬಂದಿತ್ತು. ಅದು ಇಂದಿಗೂ ಮುಂದುವರೆದಿದೆ. ಬುದ್ಧ ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಟ್ಟ. ತನ್ನ ಸಂಘಕ್ಕೆ ಶರಣು ಬಂದವರಿಗೆಲ್ಲ ದೀಕ್ಷೆ ನೀಡಿ ಬಿಕ್ಖುಗಳನ್ನಾಗಿ ಮಾಡಿದ. ಸಾಧನೆಯ ಹಾದಿ ತೋರಿದ. ಹೆಣ್ಣು ಮಕ್ಕಳಿಗೂ ಬುದ್ಧ ಕಾರುಣ್ಯದಿಂದ ಈ ಅವಕಾಶ ಒದಗಿಬಂತು. ಬಿಕ್ಖುಣಿಯರ ಸಂಖ್ಯೆ ಹೆಚ್ಚಿತು. ಬಿಕ್ಖುಣೀ ಸಂಘ ಸ್ಥಾಪನೆಯಾಯ್ತು. ಗೃಹಿಣಿಯರು, ಅವಿವಾಹಿತೆಯರು, ವೃದ್ಧೆಯರು, ವಿಧವೆಯರು ಮಾತ್ರವಲ್ಲದೆ ಸಮಾಜದ ಕೊಂಕಿಗೆ ಗುರಿಯಾಗಿದ್ದ ವೇಶ್ಯೆಯರು, ಆಸ್ಥಾನ ನರ್ತಕಿಯರಿಗೂ ಈ ಸಂಘದಲ್ಲಿ ಸಾಧನೆಯ ಅವಕಾಶ ದೊರೆಯಿತು. ಇದನ್ನು ಬೌದ್ಧ ಧರ್ಮದ ಮಹಾಕ್ರಾಂತಿ ಎಂದೇ ಹೇಳಬಹುದು.
ಪರ – ವಿರೋಧ
ಬುದ್ಧನಿಂದ ದೀಕ್ಷೆ ಪಡೆದ ಮೊತ್ತಮೊದಲ ಬಿಕ್ಖುನಿಯೆಂದರೆ ಪಜಾಪತಿ ಗೋತಮಿ. ಸಂಘಕ್ಕೆ ಮಹಿಳೆಯರನ್ನು ಸೇರಿಸಿಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ದೊಡ್ಡ ಚರ್ಚೆಯೇ ಎದ್ದಿತ್ತು. ಕೊನೆಗೂ ಎಂಟು ಗರುಧಮ್ಮ (ಕಠಿಣ ನಿಯಮಗಳು)ಗಳನ್ನು ಸೂಚಿಸಿ, ಬುದ್ಧ ಬಿಕ್ಖುಣಿಯ ಪದ ನೀಡಿ ಗೋತಮಿಯನ್ನು ಸಂಘಕ್ಕೆ ಸೇರಿಸಿಕೊಂಡ. ಉಳಿದೆಲ್ಲ ನಿಯಮಗಳು ಬಿಕ್ಖುಗಳಿಗೆ ಇರುವಂತೆಯ ಇದ್ದರೂ ಬುದ್ಧ ಸೂಚಿಸಿದ ಈ ಎಂಟು ಕಠಿಣ ನಿಯಮಗಳು ಬಿಕ್ಖುಣಿಯರಿಗೆ ಹೆಚ್ಚುವರಿಯಾಗಿ ಇಂದಿಗೂ ಉಳಿದುಕೊಂಡು ಬಂದಿದೆ.
ಸಂಘದೊಳಗೆ ಸ್ತ್ರೀಯರಿಗೆ ಅವಕಾಶ ಕೊಡುವ ಬಗ್ಗೆ ವಿವಾದ ಎದ್ದಿದ್ದು ಸಹಜವೇ ಆಗಿತ್ತು. ದೀಕ್ಷೆ ಕೋರಿ ಬಂದವರಲ್ಲಿ ಬಹುತೇಕರು ಬಿಕ್ಖುಗಳ ಮಾಜಿ ಪತ್ನಿಯರೋ ತಾಯಂದಿರೋ ಸಹೋದರಿಯರೋ ಮಕ್ಕಳೋ ಆಗಿರುತ್ತಿದ್ದರು. ಈ ಮೂಲಕ ಮತ್ತೆ ಹಳೆಯ ಬಾಂಧವ್ಯ ಬೆಸೆದು ಬಿಕ್ಖುಗಳು ಅಧ್ಯಾತ್ಮದ ಹಾದಿಯಿಂದ ವಿಮುಖರಾಗುವ ಅಪಾಯವಿತ್ತು. ಅಷ್ಟು ಮಾತ್ರವಲ್ಲ, ಎಲ್ಲ ಬಗೆಯ ಹಿನ್ನೆಲೆಯುಳ್ಳ ಅಷ್ಟೊಂದು ಸಂಖ್ಯೆಯ ಬಿಕ್ಖುಗಳ ಜೊತೆಗೆ ಹೆಣ್ಣುಮಕ್ಕಳನ್ನು ಜತನ ಮಾಡುವುದೂ ಒಂದು ಸವಾಲೇ ಆಗಿತ್ತು. ಅವರಿಗೆ ಯಾವ ರೀತಿಯ ತೊಂದರೆಯೂ ಉಂಟಾಗದೆ ನೋಡಿಕೊಳ್ಳುವ ಜವಾಬ್ದಾರಿ ಬೇಕಿತ್ತು. ಅದಕ್ಕಾಗಿಯೇ ಬುದ್ಧ ಸುವ್ಯವಸ್ಥೆಯ ಕಾರಣದಿಂದ ಹೆಚ್ಚುವರಿ ನಿಮಯಮಗಳನ್ನು ರೂಪಿಸಿ ಸ್ತ್ರೀಯರಿಗೆ ಅವಕಾಶ ಮಾಡಿಕೊಟ್ಟಿದ್ದು.
ವಿವಿಧ ಹಿನ್ನೆಲೆ
ಥೇರಾವಾದದ ಬಿಕ್ಖುಣಿಯರಲ್ಲಿ ವಿವಿಧ ಹಿನ್ನೆಲೆಯಿಂದ ಬಂದ ಬಿಕ್ಖುಣಿಯರಿದ್ದರು. ವ್ಯಾಪಾರಿಯ ಪತ್ನಿ, ಜಿಪುಣ ತಂದೆಯ ಮಗಳು, ಪಂಡಿತೆಯರು, ವೇಶ್ಯೆಯರು – ಹೀಗೆ ಎಲ್ಲ ವರ್ಗಗಳವರಿಗೂ ಅಲ್ಲಿ ಅವಕಾಶವಿತ್ತು. ಇವರಲ್ಲಿ ವಿಮಲಾ ಮತ್ತು ಅಂಬಪಾಲಿ (ಆಮ್ರಪಾಲೀ) ಜನಪ್ರಿಯ ಆಸ್ಥಾನ ನರ್ತಕಿಯರಾಗಿದ್ದರು. ಮುತ್ತಾ ಗೃಹಿಣಿಯಾಗಿದ್ದಳು. ಪುನ್ನಾ ಬ್ರಾಹ್ಮಣನೊಬ್ಬನ ಮಗಳಾಗಿದ್ದಳು. ಸುಂದರಿಯಾಗಿದ್ದ ಸೇಲಾ ತನ್ನ ತಾರುಣ್ಯದಲ್ಲೇ ಬಿಕ್ಖುಣಿಯಾಗಿ ಸಂಘಕ್ಕೆ ಸೇರಿಕೊಂಡಳು. ಕಟ್ಟುನಿಟ್ಟಿನ ಸಾಧನೆಯ ಜೊತೆಜೊತೆಗೆ ಸೇವಾಧರ್ಮವನ್ನೂ ನಡೆಸಿ ಅರ್ಹಂತ ಪದವಿಗೆ ಏರಿದಳು.
ಬಿಕ್ಖುಣಿ ದೀಕ್ಷೆ ಸ್ವೀಕರಿಸಿದವರಲ್ಲಿ ಸಂತಾನ ಕಳೆದುಕೊಂಡ ದುಃಖತಪ್ತ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉಬ್ಬಿರಿ, ಕಿಸಾ ಗೊತಮಿ, ಪಟಾಚಾರಾ ಅಂತಹ ಕೆಲವು ಥೇರಿಯರು. ಪಟಾಚಾರಳಂತೂ ತನ್ನ ಪತಿಯನ್ನೂ ಇಬ್ಬರು ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿಹೋಗಿದ್ದವಳು, ಸನ್ಯಾಸ ಸ್ವೀಕರಿಸಿ ಬಿಕ್ಖುಣಿಯಾದಳು; ಸಾಧನೆ ನಡೆಸಿ ಅರ್ಹಂತ ಪದವನ್ನು ಪಡೆದಳು.
ಚಿತ್ತಾ ಎಂಬುವಳೂ ಹಾಗೆಯೇ. ತಾರುಣ್ಯದಲ್ಲಿಯೇ ಬಿಕ್ಖುಣಿಯಾಗಿ ಬದುಕಿಡೀ ನೇಮದಲ್ಲಿ ಕಳೆದಳು. ಆದರೆ ಅವಳು ಅರ್ಹಂತ ಪದ ಪಡೆದಿದ್ದು ಮಾತ್ರ ಇಳಿ ವಯಸ್ಸಿನಲ್ಲಿ. ಹಾಗೆಂದೇ ಚಿತ್ತಾ, `ನನ್ನ ಕಾವಿಯುಡುಗೆಯನ್ನು ಬಿಸುಟು, ಭಿಕ್ಷಾಪಾತ್ರೆಯನ್ನು ಬೋರಲು ಹಾಕಿ, ಹೆಬ್ಬಂಡೆಗೆ ಮುಖ ಮಾಡಿ ಸುಮ್ಮನೆ ಕುಳಿತೆ. ಕತ್ತಲ ಗರ್ಭ ಹರಿದು ಬೆಳಕು ಮೂಡಿತು’ ಎಂದು ಹೇಳುತ್ತಾಳೆ.
ಈ ಎಲ್ಲ ಥೇರಿಯರ ಜೀವನಾನುಭವದ ಗಾಥೆಗಳನ್ನು ಗ್ರಹಿಸಲು ಸಾಧ್ಯವಾದರೆ, ಬದುಕಿನಲ್ಲಿ ನೆಮ್ಮದಿ ಕಾಣಲೊಂದು ಬೆಳಕಿಂಡಿ ತೆರೆಯುವುದು. ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕಷ್ಟೆ. ಈ ನಿಟ್ಟಿನಲ್ಲಿ ‘ಅರಳಿಮರ’ದ ಮುಖ್ಯ ಬರಹಗಾರರಾಗಿರುವ ಚಿದಂಬರ ನರೇಂದ್ರ ಅವರು ಹಿರಿಯ ಬಿಕ್ಖುಣಿಯರ ಕೆಲವು ರಚನೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಈಗಾಗಲೇ ಎರಡು ಕಂತು ಪ್ರಕಟವಾಗಿವೆ. ನಾಳೆಯಿಂದ ಈ ಸರಣಿ ಮತ್ತೆ ಮುಂದುವರೆಯಲಿದೆ.