ನೋ ಮೈಂಡ್ : ಓಶೋ ವ್ಯಾಖ್ಯಾನ

ಮನುಷ್ಯ ಬಹಳ ಪುರಾತನ ಪ್ರಾಣಿ ಆದರೆ ಅವನೊಳಗಿರುವ ಪ್ರಜ್ಞೆ ಅದು ಹಳೆಯದೂ ಅಲ್ಲ ಹೊಸದೂ ಅಲ್ಲ, ಅದು ಸದಾ ಫ್ರೆಶ್ ಆಗಿರುವಂಥದು… ~ ಓಶೋ | ಕನ್ನಡಕ್ಕೆ: ಚಿದಂಬರ

ಮ್ಯಾಡಂ ಕ್ಯೂರಿ ಅವರ ಜೊತೆ ಹೀಗಾಗಿತ್ತು. ಅವರಿಗೆ ನೋಬಲ್ ಸಿಕ್ಕಿದ್ದು ಒಂದು no mind ಕ್ಷಣದ ಕಾರಣವಾಗಿ. ಆಕೆ ಒಂದು ಸಮಸ್ಯೆಯ ಮೇಲಿನ ಕೆಲಸದಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡಿದ್ದರು. ಎಷ್ಟೋ ದಿನಗಳು, ತಿಂಗಳುಗಳು ಕಳೆದರೂ ಆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.

ಆಮೇಲೆ ಒಂದು ದಿನ ರಾತ್ರಿ ಅಚಾನಕ್ ಆಗಿ ನಿದ್ದೆಯಿಂದ ಎದ್ದ ಆಕೆ ನೇರವಾಗಿ ತನ್ನ ಡೆಸ್ಕ್ ಬಳಿ ಹೋಗಿ ಆ ಸಮಸ್ಯೆಗೆ ಉತ್ತರ ಬರೆದು ಮತ್ತು ಬಂದು ಮಲಗಿಕೊಂಡರು. ಆಕೆಗೆ ತಾನು ಮಾಡಿದ್ದರ ಬಗ್ಗೆ ಯಾವ ನೆನಪೂ ಇರಲಿಲ್ಲ.

ಮರುದಿನ ಬೆಳಿಗ್ಗೆ ಆಕೆ ತನ್ನ ಡೆಸ್ಕ್ ಬಳಿ ಬಂದಾಗ ಆಕೆಗೆ ಅಲ್ಲಿ ಆಶ್ಚರ್ಯ ಕಾದಿತ್ತು. ಎಷ್ಟು ದಿನಗಳಿಂದ ಸತಾಯಿಸುತ್ತಿದ್ದ ಸಮಸ್ಯೆಯ ಉತ್ತರ ಅಲ್ಲಿ ಡೆಸ್ಕ್ ಮೇಲಿತ್ತು. ತಕ್ಷಣಕ್ಕೆ ಅವರಿಗೆ ಆ ಉತ್ತರ ಯಾರು ಅಲ್ಲಿಟ್ಟದ್ದು ಎನ್ನುವುದು ನೆನಪಾಗಲಿಲ್ಲ. ಆದರೆ ಆ ಕೈಬರಹ ಅವರದ್ದೇ. ನಿಧಾನವಾಗಿ ಆಕೆಗೆ ಕನಸೊಂದು ನೆನಪಾದಂತೆ ಎಲ್ಲ ನೆನಪಾಗತೊಡಗಿತು. ಆ ಉತ್ತರವನ್ನ ರಾತ್ರಿ ತಾನೇ ಬರೆದದ್ದು ನೆನಪಾಯಿತು.

ಆಳ ನಿದ್ರೆಯಲ್ಲಿ ಒಮ್ನೊಮ್ಮೆ ಮೈಂಡ್ ಪೂರ್ಣವಾಗಿ ಇಲ್ಲವಾಗಿ ಬಿಡುತ್ತದೆ. No mind ಸ್ಥಿತಿ ಕೆಲಸ ಮಾಡಲಿಕ್ಕೆ ಶುರು ಮಾಡುತ್ತದೆ. ಮೈಂಡ್ ಯಾವಾಗಲೂ ಹಳೆಯದು ನೆನಪುಗಳ ಭಾರದಿಂದ ಜರ್ಜರಿತವಾದದ್ದು, ಆದರೆ no mind ಹಾಗಲ್ಲ, ಅದು ಯಾವಾಗಲೂ ತಾಜಾ, ಸದಾ ಹೊಚ್ಚ ಹೊಸತು, ಓರಿಜಿನಲ್ ಆದಂಥದು. No mind ಮುಂಜಾನೆಯ ಮಂಜಿನ ಹನಿಗಳಂತೆ ಸ್ವಚ್ಛ, ತಾಜಾ. ಮೈಂಡ್ ಯಾವಾಗಲೂ ಕೊಳಕು. ಅದು ಯಾವಾಗಲೂ ಕೊಳಕನ್ನು ಸಂಗ್ರಹಿಸುತ್ತಿರುತ್ತದೆ. ಆ ಕೊಳುಕು ಬೇರೇನೂ ಅಲ್ಲ ನಮ್ಮ ನೆನಪುಗಳು.

ನಾನು ನಿಮ್ಮ ಮೈಂಡ್ ಗಮನಿಸಿದಾಗ, ಅದು ಬಹಳ ಪುರಾತನವಾದದ್ದು, ಎಷ್ಟೋ ಬದುಕಿನ ನೆನಪುಗಳು ಅಲ್ಲಿ ಸಂಗ್ರಹಿತವಾಗಿವೆ. ಆದರೆ ನಾನು ಇನ್ನೂ ಆಳವಾಗಿ ನಿಮ್ಮನ್ನು ಗಮನಿಸಿದಾಗ ಅಲ್ಲೊಂದು ನೋ ಮೈಂಡ್ ಇದೆ. ಅದು ಕಾಲದ ಯಾವ ಪರಿಧಿಗೂ ಸಿಕ್ಕದಂಥಹದು. ಅದು ಹಳೆಯದೂ ಅಲ್ಲ ಹೊಸದೂ ಅಲ್ಲ. ಮನುಷ್ಯ ಬಹಳ ಪುರಾತನ ಪ್ರಾಣಿ ಆದರೆ ಅವನೊಳಗಿರುವ ಪ್ರಜ್ಞೆ ಅದು ಹಳೆಯದೂ ಅಲ್ಲ ಹೊಸದೂ ಅಲ್ಲ, ಅದು ಸದಾ ಫ್ರೆಶ್ ಆಗಿರುವಂಥದು.

ನಿರ್ವಾಣದ ಹಂತದವರೆಗೆ ಮಾತ್ರ ಬುದ್ಧ ನಿರ್ವಾಣವನ್ನ ವ್ಯಾಖ್ಯಾನ ಮಾಡಬಲ್ಲವನಾಗಿದ್ದಾನೆ, ಏಕೆಂದರೆ ಈ ಹಂತದಲ್ಲೂ ಮೈಂಡ್ ಸೂಕ್ಷ್ಮ ರೂಪದಲ್ಲಿ ಅಸ್ತಿತ್ವದಲ್ಲಿದ್ದು, ಶುದ್ಧ ಮೌನವನ್ನ, ಸೆಲ್ಫ್ ಲೆಸ್ ನ, ಪರಮ ಆನಂದ (bliss) ನ ಅನುಭವಿಸುತ್ತಿದೆ. ಆದರೆ ಮಹಾಪರಿನಿರ್ವಾಣ ದಲ್ಲಿ ಮೈಂಡ್ ಪೂರ್ಣವಾಗಿ ಗೈರು ಹಾಜರಾಗಿದೆ ಹಾಗಾಗಿ ಇದನ್ನ ಅನುಭವಿಸುವುದು ಕೂಡ ಅಸಾಧ್ಯ. ಪರಿ ಎಂದರೆ ಮೀರುವಿಕೆ (transcendental) ಮಹಾಪರಿನಿರ್ವಾಣ ಎಂದರೆ ನಿರ್ವಾಣವನ್ನೂ ಮೀರಿದ ಸ್ಥಿತಿ. ಇಲ್ಲಿ ಯಾವ ಅನುಭವ ಇಲ್ಲ, ಏಕೆಂದರೆ ಅನುಭವಿಸುವವ ಸಂಪೂರ್ಣವಾಗಿ ನಾಪತ್ತೆ.

ಹಾಗಾಗಿ ನಿರ್ವಾಣ ನಮ್ಮ ರಸ್ತೆ ಮುಗಿಯುವ ಕೊನೆಯ ಮೈಲುಗಲ್ಲು. ಅದರಿಂದಾಚೆ, ನೀವು ಒಬ್ಬರೇ ಕಂಡುಕೊಳ್ಳಬೇಕು. ಸುಮ್ಮನೇ ಇಂಥದೊಂದು ಸ್ಥಿತಿಗೆ ಬುದ್ಧ ಮಹಾಪರಿನಿರ್ವಾಣ ಎಂದಿದ್ದಾನೆ, ಸ್ವ ಎನ್ನುವುದರ ಮಹಾ ಮೀರುವಿಕೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.