ಸದ್ಗುಣಕ್ಕೆ ಯಾವುದೇ ನಿಜವಾದ ಮೌಲ್ಯವಿಲ್ಲ

ಕವಿ ಜಾನ್ ಮಿಲ್ಟನ್ ಜನರ ಇಂತಹ ವರ್ತನೆಯನ್ನು ವಿವರಿಸಲು ಒಂದು ಪದ ಬಳಿಸಿದ. ಅವನು ಇದನ್ನು ‘fugitive and cloistered virtue’ ಎಂದು ಕರೆದ. ಅವನ ಅಭಿಪ್ರಾಯದಲ್ಲಿ, ಇಂತಹ ಸದ್ಗುಣಕ್ಕೆ ಯಾವುದೇ ನಿಜವಾದ ಮೌಲ್ಯವಿಲ್ಲ… । ಸಂಗ್ರಹ- ಅನುವಾದ : ಚಿದಂಬರ ನರೇಂದ್ರ

ಕೆಲವರು ತಮ್ಮನ್ನು ತಾವು ಬಲಿಷ್ಠರು ಎಂದು ಹೇಳಿಕೊಳ್ಳುತ್ತಾರೆ, ಆದರೆ ಅವರ ಜೀವನದಲ್ಲಿ ಅವರ ಶಕ್ತಿಯನ್ನು ಪರೀಕ್ಷಿಸುವಂತಹ ಸಂದರ್ಭವೇ ಬಂದಿರುವುದಿಲ್ಲ. ಕೆಲವರು ಎಂದಿಗೂ ನಿಜವಾದ ಪ್ರಲೋಭನೆಯನ್ನು (temptation ) ಎದುರಿಸಿರುವುದಿಲ್ಲ, ಆದರೂ ಅವರು ತಮ್ಮನ್ನು ತಾವು ಶಿಸ್ತಿನವರು ಎಂದು ಕರೆದುಕೊಳ್ಳುತ್ತಾರೆ. ಇನ್ನೂ ಕೆಲವರು ಎಂದೂ ನಿಜವಾದ ಕಷ್ಟ-ಸಂಕಟಗಳನ್ನು ಅನುಭವಿಸಿರುವುದಿಲ್ಲ, ಆದರೂ ಅವರು ತಮ್ಮನ್ನು ಸಹಿಷ್ಣುಗಳು (Resilient) ಎಂದು ಹೇಳಿಕೊಳ್ಳುತ್ತಾರೆ.

1644ರಲ್ಲಿ, ಕವಿ ಜಾನ್ ಮಿಲ್ಟನ್ ಜನರ ಇಂತಹ ವರ್ತನೆಯನ್ನು ವಿವರಿಸಲು ಒಂದು ಪದ ಬಳಿಸಿದ. ಅವನು ಇದನ್ನು ‘fugitive and cloistered virtue’ ಎಂದು ಕರೆದ. ಅವನ ಅಭಿಪ್ರಾಯದಲ್ಲಿ, ಇಂತಹ ಸದ್ಗುಣಕ್ಕೆ ಯಾವುದೇ ನಿಜವಾದ ಮೌಲ್ಯವಿಲ್ಲ.
ಯಾವುದೇ ಸದ್ಗುಣವು ಒಮ್ಮೆಯೂ ಪರೀಕ್ಷೆಗೆ ಒಳಗಾಗದಿದ್ದರೆ, ಅದನ್ನು ನಿಜವಾದ ಸದ್ಗುಣವೆಂದು ಕರೆಯಲು ಸಾಧ್ಯವಿಲ್ಲ ಎಂದು ಮಿಲ್ಟನ್ ವಾದಿಸಿದ.

ನಾನು ನನ್ನನ್ನು ಏನು ಬೇಕಾದರೂ ಕರೆದುಕೊಳ್ಳಬಹುದು. ನಾನು ಧೈರ್ಯಶಾಲಿ, ಶ್ರಮಜೀವಿ, ದಯಾಳು, ಸಹಿಷ್ಣು ಅಥವಾ ಇನ್ನಾವುದೇ ಗುಣವಂತನೆಂದು ಹೇಳಿಕೊಳ್ಳಬಹುದು. ಆದರೆ ಆ ಗುಣಗಳನ್ನು ನನ್ನ ನಡೆ-ನುಡಿಗಳ ಮೂಲಕ ನಿಜವಾಗಿ ತೋರಿಸದಿದ್ದರೆ, ಅವೆಲ್ಲವೂ ಕೇವಲ ಖಾಲಿ ಪದಗಳಷ್ಟೇ.
ಅವು ಜೀವನದಲ್ಲಿ ಇನ್ನೂ ಪರೀಕ್ಷೆಗೆ ಒಳಗಾಗದ ವ್ಯಕ್ತಿಯ ಜಂಬದ ಮಾತುಗಳಷ್ಟೇ.

ಸ್ಟೊಯಿಕ್ ತತ್ವಜ್ಞಾನಿ Marcus Aurelius ಒಮ್ಮೆ ಹೀಗೆ ಹೇಳಿದ್ದ : ಒಳ್ಳೆಯ ವ್ಯಕ್ತಿ ಎಂದರೆ ಯಾರು ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತಾ ಸಮಯ ವ್ಯರ್ಥ ಮಾಡಬೇಡಿ. ಅದರ ಬದಲಿಗೆ, ನೀವೇ ಒಳ್ಳೆಯ ವ್ಯಕ್ತಿಯಾಗಿರಿ.
ಅವನು ತನ್ನ Meditations ಕೃತಿಯನ್ನು ಖಾಸಗಿ ಬಳಕೆಗಾಗಿ ಬರೆದಿದ್ದ, ಅವನಿಗೆ ಅದನ್ನು ಪ್ರಕಟಿಸುವ ಉದ್ದೇಶವೇ ಇರಲಿಲ್ಲ. ಏಕೆಂದರೆ, ಔರೇಲಿಯಸ್ ನ ಅಭಿಪ್ರಾಯದಲ್ಲಿ, ಸದ್ಗುಣವು ಭಾಷಣ ಮಾಡುವ ವಿಷಯವಲ್ಲ; ಅದು ಜೀವನದಲ್ಲಿ ಆಚರಿಸಬೇಕಾದ ಅಭ್ಯಾಸ. ರೋಮನ್ ಸಾಮ್ರಾಜ್ಯದ ಅತ್ಯಂತ ಪ್ರಬಲ ವ್ಯಕ್ತಿಯಾಗಿದ್ದ ಅವನು, ಯಾರೂ ಓದಲು ಉದ್ದೇಶಿಸದ ಒಂದು ಖಾಸಗಿ ದಿನಚರಿಯಲ್ಲಿ ತನ್ನನ್ನು ತಾನೇ ಆತ್ಮಪರಿಶೀಲನೆಗೆ ಒಳಪಡಿಸಿಕೊಳ್ಳುತ್ತಿದ್ದ.

John Milton ಮತ್ತು Marcus Aurelius ಅವರ ಪ್ರಕಾರ, ಒಳ್ಳೆಯ ವ್ಯಕ್ತಿಯನ್ನು ಅವನು ಮಾಡುವ ಒಳ್ಳೆಯ ಕಾರ್ಯಗಳೇ ನಿರ್ಧರಿಸುತ್ತವೆ. ಒಳ್ಳೆಯ ವ್ಯಕ್ತಿಗಳು ತಮ್ಮ ಸದ್ಗುಣಗಳ ಬಗ್ಗೆ ತಾವೇ ಮಾತನಾಡುವುದಿಲ್ಲ; ಅವುಗಳನ್ನು ಪ್ರದರ್ಶಿಸಿ ಸಂಭ್ರಮಿಸುವುದೂ ಇಲ್ಲ. ಅವರು ಲೋಕದ ಸವಾಲುಗಳಿಂದ ಹಿಂದೆ ಸರಿಯುವುದಿಲ್ಲ ಅಥವಾ ನೈತಿಕ ಪರೀಕ್ಷೆಗಳಿಂದ ಓಡಿ ಹೋಗುವುದಿಲ್ಲ. ಬದಲಾಗಿ, ಅವರು ತಮ್ಮ ನಿಲುವಿನಲ್ಲಿ ದೃಢವಾಗಿ ನಿಂತು, ಆ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುತ್ತಾರೆ.
ಯಾವ ಸದ್ಗುಣವೂ, ಅದು ಎಂದಿಗೂ ಪರೀಕ್ಷೆಗೆ ಒಳಗಾಗದಿದ್ದರೆ, ಅದನ್ನು ನಿಜವಾದ ಸದ್ಗುಣ ಎಂದು ಕರೆಯಲು ಸಾಧ್ಯವಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.