ಝುಸಿಯಾನ ಅಂತಿಮ ದುಃಖ : ಒಂದು ಸೂಫಿ ಕಥೆ

ಸಾವಿನ ಹಾಸಿಗೆಯಲ್ಲಿ ಝುಸಿಯಾ ದುಃಖಿಸಿದ್ದೇಕೆ ಗೊತ್ತೆ? ಓದಿ ಈ ಸೂಫಿ ಕಥೆ । ಕನ್ನಡಕ್ಕೆ: ಚಿದಂಬರ ನರೇಂದ್ರ

ಸಾವಿನ ಹಾಸಿಗೆಯಲ್ಲಿದ್ದ ಅನುಭಾವಿ ಝುಸಿಯಾ ಪ್ರಾರ್ಥನೆ ಶುರು ಮಾಡುತ್ತಿದ್ದಂತೆಯೇ ಅವನ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. ಅವನು ಕಂಪಿಸತೊಡಗಿದ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಝುಸಿಯಾನನ್ನ ಪ್ರಶ್ನೆ ಮಾಡಿದ, “ ಯಾಕೆ ಏನಾಯ್ತು, ಯಾಕೆ ಅಳುತ್ತಿದ್ದೀಯ?”

“ ಇದು ನನ್ನ ಕೊನೆಯ ಕ್ಷಣಗಳು, ಇನ್ನೇನು ನಾನು ಸಾಯುವವನಿದ್ದೇನೆ. ದೇವರನ್ನು ಭೇಟಿ ಮಾಡುವ ಗಳಿಗೆ ಹತ್ತಿರವಾಗುತ್ತಿದೆ. ದೇವರು ನನ್ನ ಭೇಟಿ ಮಾಡಿದ ತಕ್ಷಣ ಪ್ರಶ್ನೆ ಮಾಡಬಹುದು, ಯಾಕೆ ಝುಸಿಯಾ ನೀನು ಮೋಸೆಸ್ ನಂತೆ ಆಗಲಿಲ್ಲ? “

“ ಭಗವಂತ, ನೀನು ನನಗೆ ಮೋಸೆಸ್ ನ ಸ್ವಭಾವ, ಗುಣ ಲಕ್ಷಣಗಳನ್ನು ಕೊಡಲಿಲ್ಲ, ಹಾಗಾಗಿ ನಾನು ಮೋಸೆಸ್ ಆಗಲು ಸಾಧ್ಯವಾಗಲಿಲ್ಲ ಎಂದು ದೇವರ ಈ ಪ್ರಶ್ನೆಗೇನೋ ನಾನು ಉತ್ತರಿಸಬಲ್ಲೆ, “

“ದೇವರು ಆಮೇಲೆ ನನ್ನ ಪ್ರಶ್ನೆ ಮಾಡಬಹುದು, ಯಾಕೆ ನಾನು ರಬ್ಬಿ ಅಕೀಬಾ ನಂತೆ ಆಗಲಿಲ್ಲ ಎಂದು. ಆಗಲೂ ನಾನು ದೇವರಿಗೆ ಇದೇ ಉತ್ತರ ಕೊಡಬಲ್ಲೆ, ನೀನು ನನಗೆ ಅಕೀಬಾನ ಗುಣ ಸ್ವಭಾವಗಳನ್ನು ಕೊಡದ ಕಾರಣಕ್ಕಾಗಿ ಎಂದು. “

“ ಆದರೆ ದೇವರು ಅಕಸ್ಮಾತ್ ಆಗಿ, ಯಾಕೆ ನೀನು ಝುಸಿಯಾನಂತೆ ಬದುಕಲಿಲ್ಲ ಎಂದು ಪ್ರಶ್ನೆ ಮಾಡಿದರೆ, ಏನು ಉತ್ತರ ಹೇಳಲಿ? ದೇವರ ಮುಂದೆ ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲುವ ಹೊರತಾಗಿ ಬೇರೆ ದಾರಿ ಇಲ್ಲ ನನಗೆ. ಇಂಥದೊಂದು ಪರಿಸ್ಥಿತಿ ನೆನಸಿಕೊಡು ನಾನು ನಡುಗುತ್ತಿದ್ದೇನೆ. “

“ ನನ್ನ ಇಡೀ ಬದುಕಿನಲ್ಲಿ ನಾನು ಮೋಸೆಸ್ ನಂತೆ, ಅಕೀಬಾ ನಂತೆ ಬದುಕಲು ಪ್ರಯತ್ನ ಮಾಡಿದೆ, ಅವರನ್ನು ಅನುಸರಿಸುವ ವಿಫಲ ಪ್ರಯತ್ನ ಮಾಡಿದೆ. ಆದರೆ ದೇವರು ನನ್ನನ್ನು ಝುಸಿಯಾ ನಂತೆ ಬದುಕಲು ಸೃಷ್ಟಿ ಮಾಡಿದ್ದ. ನಾನು ದೇವರ ಈ ಕಾರಣವನ್ನು ಗಮನಿಸದೇ ಇಡೀ ಜೀವನವನ್ನು ಇನ್ನೊಬ್ಬರಂತೆ ಬದುಕಲು ಪ್ರಯತ್ನಿಸಿ ಹಾಳು ಮಾಡಿಕೊಂಡೆ. ದೇವರು ಈ ಬಗ್ಗೆ ನನ್ನ ಪ್ರಶ್ನೆ ಮಾಡಿದರೆ ನಾನು ಏನೆಂದು ಉತ್ತರಿಸಲಿ? “

“ ನಿನಗೆ ಝುಸಿಯಾನಂತೆ ಬದುಕುವ ಎಲ್ಲ ಗುಣ ಸ್ವಭಾವಗಳನ್ನು ಕೊಟ್ಚಿದ್ದೆ ಆದರೆ ಯಾಕೆ ನೀನು ಝುಸಿಯಾನಂತೆ ಬದುಕಲಿಲ್ಲ ಎಂದು ದೇವರು ಪ್ರಶ್ನೆ ಮಾಡಿದರೆ, ದೇವರಿಗೆ ಏನು ಉತ್ತರ ಹೇಳಲಿ?”

ಅನುಭಾವಿ ಝುಸಿಯಾ ಬಿದ್ದು ಬಿದ್ದು ಕಣ್ಣೀರು ಹಾಕತೊಡಗಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.