“ದೈವಾನುಗ್ರಹದಿಂದ ನಿನ್ನಲ್ಲಿ ಏನಾದರೂ ಬದಲಾವಣೆ ಆಗಿದೆಯಾ?” ಎಂಬ ಪ್ರಶ್ನೆಗೆ ಸೂಫಿ ಕೊಟ್ಟ ಉತ್ತರ ಮತ್ತು ವಿವರಣೆ… । ಚಿದಂಬರ ನರೇಂದ್ರ
ದೇವನ ನಿರಾಕರಣೆಯೂ
ದೈವಿಕವಾಗಿರುತ್ತದೆ ಎಂಬ ಸತ್ಯ
ತುಂಬ ಜನರಿಗೆ ಗೊತ್ತಿಲ್ಲ.
” ನಿನ್ನ ತುಟಿಗೇನಾದರೂ
ಜೇನು ಮೆತ್ತಿಕೊಂಡಿದೆಯಾ”
ಎಂಬ ನನ್ನ ಪ್ರಶ್ನೆಗೆ
ಒಮ್ಮೆ ತುಟಿ ಸವರಿಕೊಂಡು
ಉತ್ತರಿಸಿದ ಆತ
“ಇಲ್ಲವಲ್ಲ”
ಈ ನಿರಾಕರಣೆಯೂ
ಒಂದು ಬಗೆಯ ‘ಜೇನು’
ಎನ್ನುವುದನ್ನ
‘ರುಚಿ’ ಬಲ್ಲವರೇ ಬಲ್ಲರು.
- ರೂಮಿ
ಒಮ್ಮೆ ಸೂಫಿ ಉವೈಸ್ ನ ಪ್ರಶ್ನೆ ಮಾಡಲಾಯಿತು.
ದೈವಾನುಗ್ರಹದಿಂದ ನಿನ್ನಲ್ಲಿ ಏನಾದರೂ ಬದಲಾವಣೆ ಆಗಿದೆಯಾ?
ಸೂಫಿ ಉತ್ತರಿಸಿದ ;
ಹೌದು, ನಾನು ಮುಂಜಾನೆ ನಿದ್ದೆಯಿಂದ ಎದ್ದಾಗ, ತಾನು ಸಂಜೆಯ ತನಕ ಬದುಕುವುದು ಖಾತ್ರಿ ಇಲ್ಲದ ಮನುಷ್ಯ ಅನುಭವಿಸುವ ಭಾವವನ್ನ ನಾನು ಅನುಭವಿಸುತ್ತೇನೆ.
ಸೂಫಿಯನ್ನ ಮತ್ತೆ ಪ್ರಶ್ನೆ ಮಾಡಲಾಯಿತು,
ಇದು ಎಲ್ಲರಿಗೂ ಗೊತ್ತಿರುವ ವಿಷಯ ಅಲ್ಲವೆ? ಇದರಲ್ಲೇನು ಅಂಥ ವಿಶೇಷ?
ಉವೈಸ್ ಉತ್ತರಿಸಿದ :
“ ಹೌದು ಈ ವಿಷಯ ಎಲ್ಲರಿಗೂ ಗೊತ್ತು ಆದರೆ, ಯಾರೂ ಈ ಭಾವವನ್ನ ಅನುಭವಿಸುವುದಿಲ್ಲ.
ವೈನ್ ನ ವಿಷಯ ಗೊತ್ತಿದ್ದ ಮಾತ್ರಕ್ಕೆ ಯಾರಿಗೂ ನಶೆ ಏರುವುದಿಲ್ಲ.
ಅನುಗ್ರಹ ಇದ್ದಾಗ ಮಾತ್ರ ಇದು ಸಾಧ್ಯ.
ಒಂದು ದಿನ ಇಬ್ಬರು ವ್ಯಕ್ತಿಗಳು ಓಡುತ್ತ ನಸ್ರುದ್ದೀನ್ ನ ಮನೆಗೆ ಬಂದರು.
“ ಯಾಕೆ ಏನಾಯ್ತು ? “ ಆ ಇಬ್ಬರನ್ನು ವಿಚಾರಿಸಿದ ನಸ್ರುದ್ದೀನ್.
“ ಮಾರ್ಕೇಟ್ ನಲ್ಲಿ ಒಂದು ಕಾರ್ ಅಪಘಾತದಲ್ಲಿ ಒಬ್ಬ ಮನುಷ್ಯ ಸತ್ತು ಹೋಗಿದ್ದಾನೆ, ಸತ್ತುಹೋದ ಮನುಷ್ಯ ಥೇಟ್ ನಿನ್ನ ಹಾಗೆ ಕಾಣಿಸುತ್ತಿದ್ದ. ಅದಕ್ಕೇ ನಿನ್ನ ಹೆಂಡತಿಗೆ ವಿಷಯ ತಿಳಿಸಲು ಓಡಿ ಬಂದೆವು. “
ಆ ಇಬ್ಬರು ನಸ್ರುದ್ದೀನ್ ಗೆ ತಾವು ಬಂದ ಕಾರಣ ವಿವರಿಸಿದರು.
“ ಸತ್ತ ವ್ಯಕ್ತಿ ನನ್ನಷ್ಟೇ ಎತ್ತರವಿದ್ದನಾ? “ ವಿಚಾರಿಸಿದ
ನಸ್ರುದ್ದೀನ್.
“ ಹೌದು, ಬರೋಬ್ಬರಿ ನಿನ್ನಷ್ಟೇ ಎತ್ತರ “
“ ನನ್ನ ಹಾಗೇ ಇತ್ತಾ ಅವನ ಗಡ್ಡ ? “
“ ಥೇಟ್ ನಿನ್ನ ಹಾಗೆ “
“ ಯಾವ ಬಣ್ಣದ ಶರ್ಟ ಹಾಕಿಕೊಂಡಿದ್ದ ? “
“ ಪಿಂಕ್ ಕಲರ್ ಶರ್ಟ್ “
“ ಸಧ್ಯ ಪಿಂಕ್ ಕಲರ್ ಶರ್ಟ್ ನನ್ನ ಹತ್ತಿರ ಇಲ್ಲ , ನಾನು ಬದುಕಿಕೊಂಡೆ “
ನಿಟ್ಟುಸಿರು ಬಿಟ್ಟ ನಸ್ರುದ್ದೀನ್.
(Anthony de Mello ಲೇಖನ ಆಧಾರಿತ…)